ಪಾದುಕೆ ದರ್ಶನದ ನಂತರ ಬೇಡಿಕೆ ಮಂಡಿಸಿದ ಮುತಾಲಿಕ್
ಚಿಕ್ಕಮಗಳೂರು, ಅ.25 : ದತ್ತ ಅಭಿಯಾನದ ಒಂದು ಭಾಗವಾದ ದತ್ತ ಸಂಕೀರ್ತನಾ ಯಾತ್ರೆ ಚಿಕ್ಕಮಗಳೂರಿನಲ್ಲಿ ಶಾಂತಯುತವಾಗಿ ನಡೆಯುತ್ತಿದೆ. ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ.
ಬುಧವಾರ(ಅ.24) ಆರಂಭವಾದ ಸಂಕೀರ್ತನಾ ಯಾತ್ರೆಯಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾಮಧೇನು ಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ಬಲರಾಮೇಶ್ವರ ದೇವಸ್ಥಾನದಲ್ಲಿ ಅಂತ್ಯಗೊಂಡಿತು. ಜಾನಪದ ಕಲಾವಿದರಿಲ್ಲದಿದ್ದರೂ, ಮೆರವಣಿಗೆಯಲ್ಲಿ ಕೆಲವರು ಭಜನೆ ಪದಗಳನ್ನು ಹಾಡುತ್ತಿದ್ದರು. ಅಲಂಕೃತ ದತ್ತಾತ್ರೇಯ ಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಗಿತ್ತು. ನಂತರ ಭಕ್ತರು ದತ್ತ ಪೀಠಕ್ಕೆ ತೆರಳಿ ಪಾದುಕೆಗಳ ದರ್ಶನ ಪಡೆದರು.
ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು, ರಾಷ್ಟ್ರೀಯ ಹಿಂದೂ ಸೇನೆಯ ಪ್ರಮೋದ್ ಮುತಾಲಿಕ್, ಸ್ವಾಮಿ ಆತ್ಮನಂದಾಜೀ, ಶಾಸಕ ಸಿ.ಟಿ.ರವಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂತರ ಸುದ್ದಿಗಾರರ ಜೊತೆ ಮುತಾಲಿಕ್ ಮಾತನಾಡಿದರು.
ಡಿಸೆಂಬರ್ ವೇಳೆಗೆ ದತ್ತ ಪೀಠ ವಿವಾದಕ್ಕೆ ಸರ್ಕಾರ ತೆರೆ ಎಳೆಯಬೇಕು. ಇಲ್ಲಿನ ಗೋರಿಗಳ ಸ್ಥಳಾಂತರ, ದತ್ತಾತ್ರೇಯ ವಿಗ್ರಹ ಪ್ರತಿಸ್ಥಾಪನೆ, ಹೋಮ ಹವನ ನಡೆಸಲು ಅವಕಾಶ,ನಿರ್ಬಂಧಗಳಿಲ್ಲದೇ ಪ್ರವೇಶ ಸೇರಿದಂತೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications