ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಲು ಕೊಡವರ ನಿರ್ಧಾರ
ಮಡಿಕೇರಿ, ಅ.17 : ಕೊಡಗು ವಿಮೋಚನಾ ಸಮಿತಿ, ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಬಹಿಷ್ಕರಿಸಲು ತೀರ್ಮಾನಿಸಿದೆ. ಈ ಭಾಗದ ಅಭಿವೃದ್ಧಿಯತ್ತ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ದೂರಿರುವ ಸಮಿತಿ, ನ.1ರಂದು ಕೊಡಗು ಬಂದ್ ಗೆ ಕರೆ ನೀಡಿದೆ.
ಬೆಂಗಳೂರು ಕೊಡವ ಸಮಾಜದ ದಾದಾ ಬೆಳ್ಳಿಯಪ್ಪ ಮತ್ತು ಗೌಡ ಸಮಾಜ ವಾಸು ನಾಯಕತ್ವದಲ್ಲಿ ನಡೆದ ಸಭೆಯಲ್ಲಿ, ರಾಜ್ಯೋತ್ಸವ ಬಹಿಷ್ಕರಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ತೀರ್ಮಾನ ಕೈಗೊಳ್ಳಲಾಯಿತು.
ನಾವು ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುವುದಿಲ್ಲ. ಈ ಭಾಗದ ಅಭಿವೃದ್ಧಿಯತ್ತ ಸರ್ಕಾರಗಳು ಗಮನ ಹರಿಸಬೇಕು. ಭರವಸೆಗಳ ಮುಖಾಂತರವೇ, ಜನರನ್ನು ವಂಚಿಸಲಾಗುತ್ತಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಮಾಜಿ ಸಚಿವ ಎಂ.ಸಿ.ನಾಣಯ್ಯ ಸಭೆಯಲ್ಲಿ ಮಾತನಾಡುತ್ತಾ, ಮುಖ್ಯಮಂತ್ರಿಗಳ ಆದೇಶಗಳಿಂದ ಪ್ರಯೋಜನವಿಲ್ಲ. ಅನುಷ್ಠಾನ ನಡೆಯಬೇಕು. ಗ್ರೇಟರ್ ಕಾವೇರಿ ಯೋಜನೆಯನ್ನು ಸರ್ಕಾರ ಮರೆತಿದೆ. ನವೆಂಬರ್ 1ನ್ನು ಈ ಸಲ ಕರಾಳ ದಿನವಾಗಿ ಆಚರಿಸಿ, ಸರ್ಕಾರದ ಗಮನ ಸೆಳೆಯೋಣ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಜಿ.ಬೊಪ್ಪಯ್ಯ, ಜಿಲ್ಲೆಯಲ್ಲಿನ ಕೆಲವು ಅಧಿಕಾರಿಗಳು ಜನರನ್ನು ಹಿಂಸಿಸುತ್ತಿದ್ದಾರೆ. ಆ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದೀರ್ಗಾಕೇಶಿ ಶಿವಣ್ಣ, ಮಾಜಿ ಸಚಿವೆ ಸುಮಾ ವಸಂತ್, ವಕೀಲ ಎ.ಕೆ.ಸುಬ್ಬಯ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
(ಯುಎನ್ಐ)












Click it and Unblock the Notifications