ಗೊಂದಲಗಳ ಗೂಡಿನಲ್ಲಿ ಊಹಾಪೋಹಗಳದ್ದೇ ದರ್ಬಾರು
ಬೆಂಗಳೂರು, ಅ.08 : ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಕರ್ನಾಟಕ ರಾಜಕೀಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿಯಾಗಿದೆ. ಸೂತ್ರದ ಬೊಂಬೆಯಾಟದಂತಿರುವ ಈ ನಾಟಕದಲ್ಲಿ ಯಾರು ಸೂತ್ರಧಾರ, ಯಾರು ಪಾತ್ರಧಾರಿಗಳು ತಿಳಿಯದ ಗೊಂದಲ ಸೃಷ್ಟಿಯಾಗಿದೆ. ಎಲ್ಲ ರಾಜಕೀಯ ಲೆಕ್ಕಾಚಾರಗಳು ಉಲ್ಟಾಪುಲ್ಟಾ ಆಗಿ ಜನಸಾಮಾನ್ಯರನ್ನು ಗೊಂದಲಕ್ಕೆ ನೂಕಿವೆ.
ಇನ್ನೇನು ವಿಧಾನಸಭೆ ವಿಸರ್ಜನೆಯಾಗಿ ಚುನಾವಣೆ ಘೋಷಣೆಯೊಂದೇ ಬಾಕಿಯೆನ್ನುವಾಗ ಸರ್ಕಾರ ರಚಿಸುವ ಬೇಡಿಕೆಯನ್ನು ಬಿಜೆಪಿಯ ಮುಂದೆ ಕುಮಾರಸ್ವಾಮಿ ಇಟ್ಟಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇದೆಲ್ಲ ಬೆಳವಣಿಗೆ ಬಗ್ಗೆ ಪಿಟ್ಟೆನ್ನುತ್ತಿಲ್ಲ. ಮುಂದಿನ ನಡೆಯ ಬಗ್ಗೆ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಲ್ಪಟ್ಟರೂ ಎಷ್ಟು ದಿನ? ಇದರಲ್ಲಿ ದೇವೇಗೌಡರ ಪಾತ್ರವೇನು? ಡೀಲ್ ಬಗ್ಗೆ ರೇವಣ್ಣ ಸಿಟ್ಟಿಗೇಕೆದ್ದಿದ್ದಾರೆ? ಇದೆಲ್ಲ ಮತ್ತೊಂದು ನಾಟಕವೇ? ಈ ಪ್ರಶ್ನೆಗಳಿಗೆ ಯಾವುದೇ ಉತ್ತರಗಳಿಲ್ಲ. ಸದ್ಯಕ್ಕೆ ಇಡೀ ರಾಷ್ಟ್ರದ ಲಕ್ಷ್ಯ ರಾಜ್ಯಪಾಲರತ್ತ ನೆಟ್ಟಿದೆ.
ನಡೆಯುತ್ತಿರುವುದಾದರೂ
ಏನು?
- ಕಾಂಗ್ರೆಸ್ನ ಎಣಿಕೆ ಮೀರಿ ಬಿಜೆಪಿ ಜೆಡಿಎಸ್ ವಲಯದಲ್ಲಿ ಮರುದೋಸ್ತಿಯ ಚಿಂತನೆ
- ಜೆಡಿಎಲ್ಪಿ ಸಭೆಯಲ್ಲಿ ಅಧಿಕಾರ ಹಸ್ತಾಂತರಿಸಲು ಹಿರಿಯ ನಾಯಕರಿಂದ ಸೂಚನೆ
- ಕುಮಾರಸ್ವಾಮಿಯೇ ಇನ್ನು 3 ತಿಂಗಳು ಮುಖ್ಯಮಂತ್ರಿಯಾಗಿ ಮುಂದುವರಿಯಲು ಕೆಲವರ ಒಲವು
- ಜೆಡಿಎಸ್ ಶಾಸಕಾಂಗ ಸಭೆಯಿಂದ ಹಠಾತ್ತನೆ ಅರ್ಧದಲ್ಲೇ ಹೊರನಡೆದ ಸಚಿವ ರೇವಣ್ಣ
- ರಾಜಭವನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ರಾಜಿನಾಮೆ ಸಲ್ಲಿಕೆ
- ಯಡಿಯೂರಪ್ಪ ಮುಖ್ಯಮಂತ್ರಿ, ಕುಮಾರಸ್ವಾಮಿ ಉಪಮುಖ್ಯಮಂತ್ರಿಯಾಗಬಹುದು
- ಯಡಿಯೂರಪ್ಪ ಮುಖ್ಯಮಂತ್ರಿ, ಚೆಲುವರಾಯಸ್ವಾಮಿ ಉಪಮುಖ್ಯಮಂತ್ರಿಯಾಗಲೂಬಹುದು
- ಗೊಂದಲಗಳ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರಿಂದ 'ನೋ ಕಮೆಂಟ್ಸ್'
- ಮೊದಲು ಅಧಿಕಾರ ನೀಡಿ ನಂತರ ಬಲವಾದ ಕಾರಣ ನೀಡಿ ಬೆಂಬಲ ಹಿಂತೆಗೆದುಕೊಳ್ಳಲು ಕೆಲ ಜೆಡಿಎಸ್ ಸಚಿವರಿಂದ ಸೂಚನೆ
- ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ರಾಷ್ಟ್ರಪತಿ ಆಡಳಿತ ಹೇರಲು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರಿಂದ ಚಿಂತನೆ
(ದಟ್ಸ್ಕನ್ನಡ ವಾರ್ತೆ)