ನಂಬಿಕೆಗಾಗಿ ಮಾತ್ರವಲ್ಲ,ಭವಿಷ್ಯಕ್ಕೂ ರಾಮಸೇತು ಬೇಕು!
ಬೆಂಗಳೂರು, ಅ.4 : ರಾಮಸೇತುವನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಿ... ಹಾಗೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ಎಸ್.ಚಂದ್ರಶೇಖರ ಭಂಡಾರಿ ಅಭಿಪ್ರಾಯ ಪಟ್ಟಿದ್ದಾರೆ.
ಮಿಥಿಕ್ ಸೊಸೈಟಿಯಲ್ಲಿ ಏರ್ಪಡಿಸಲಾಗಿದ್ದ 'ರಾಮಸೇತು : ವಿವಾದ ಏನು? ಏಕೆ?" ಕುರಿತು ಮಾತನಾಡಿದ ಅವರು, ರಾಮಸೇತು ಬಗ್ಗೆ ಕರುಣಾನಿಧಿ ಮತ್ತು ಬಾಲೂ ಹೇಳಿರುವುದು ಹತಾಶಯ ಹೇಳಿಕೆಗಳು. ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಸೇತು ನಾಶದಿಂದ ಅಮೂಲ್ಯ ಥೋರಿಯಂ ನಿಕ್ಷೇಪ ನಾಶವಾಗುತ್ತದೆ. ದಕ್ಷಿಣ ತಮಿಳುನಾಡು ಸಂಪೂರ್ಣ ಕೊಚ್ಚಿ ಹೋಗುತ್ತದೆ. ಮೀನುಗಾರರು ಬೀದಿ ಪಾಲಾಗುತ್ತಾರೆ. ಭೌಗೋಳಿಕ, ಐತಿಹಾಸಿಕ, ಪರಿಸರ ಮತ್ತು ಭದ್ರತೆಯ ದೃಷ್ಟಿಯಿಂದಲೂ ರಾಮಸೇತುವಿನ ನಾಶ ಅಪಾಯಕಾರಿ ಎಂದು ಅವರು ಎಚ್ಚರಿಸಿದರು.
ಚರ್ಚ್ ಉಳಿಸಲು ಕೊಂಕಣ ರೈಲಿನ ಹಾದಿಯನ್ನು ಬದಲಿಸಿದರು. ತಾಜ್ಮಹಲ್ನ ರಕ್ಷಣೆಗಾಗಿ ಅದರ ಸುತ್ತಲಿನ ಹಲವು ಕಾರ್ಖಾನೆಗಳನ್ನು ಸ್ಥಳಾಂತರಿಸಲಾಯಿತು. ಹಾಗೆಯೇ ರಾಮಸೇತು ಯೋಜನೆಯನ್ನು ಕೇಂದ್ರ ಕೈಬಿಡಬೇಕು. ಅವಸರಪಡದೆ ಸಮಗ್ರ ಅಧ್ಯಯನ ನಡೆಸಿ ಮುಂದುವರಿಯಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಶಿವಕುಮಾರ ಸ್ವಾಮಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
(ದಟ್ಸ್ಕನ್ನಡ ವಾರ್ತೆ)