ಕೋಮುವಾದಿಗಳಿಗೆ ಅಧಿಕಾರ ಕೊಡೋದಿಲ್ಲ:ಕುಮಾರಸ್ವಾಮಿ
ಬೆಂಗಳೂರು, ಅ.04 : ಬಿಜೆಪಿಗೆ ಅಧಿಕಾರ ಹಸ್ತಾಂತರ ಸಾಧ್ಯವೇ ಇಲ್ಲ. ಕೋಮುವಾದಿಗಳ ಕೈಗೆ ರಾಜ್ಯದ ಅಧಿಕಾರ ಕೊಟ್ಟರೆ, ಏನಾಗುತ್ತದೆ ಎಂಬುದು ನಮಗೆ ಗೊತ್ತಿದೆ. ನಾವು ಜನತಾ ನ್ಯಾಯಾಲಯ(ಚುನಾವಣೆ)ಕ್ಕೆ ಹೋಗಲು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಬೆಂಗಳೂರಿನಲ್ಲಿ ರಾಮಸೇತು ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರವನ್ನು ನೆನಪು ಮಾಡಿಕೊಂಡರು. ಬಸ್ ಗೆ ಬೆಂಕಿ ಇಟ್ಟ ಘಟನೆಯನ್ನು ಯಾವೊಬ್ಬ ಬಿಜೆಪಿ ನಾಯಕರೂ ಖಂಡಿಸಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಬಂಧನಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ಮೌನ ವಹಿಸಿದೆ ಎಂದು ದೂರಿದರು.
ಬಿಜೆಪಿ ನಾಯಕರ ರಕ್ತದಾಹದ ಬಗ್ಗೆ ನನಗೆ ಗೊತ್ತಿದೆ. ಹಿಂದೆ ನಮ್ಮ ತಂದೆಯ ಮಾತು ಮೀರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದೆ. ಈಗ ಪಶ್ಚತ್ತಾಪ ಅನುಭವಿಸುತ್ತಿದ್ದೇನೆ. ಕಳೆದ 20ತಿಂಗಳಲ್ಲಿ ನನಗಾದ ಮಾನಸಿಕ ಹಿಂಸೆ ಬಗ್ಗೆ ಯಾರಿಗೂ ಅರಿವಿಲ್ಲ. ಅಂತಿಮವಾಗಿ ಅಧಿಕಾರ ಹಸ್ತಾಂತರ ವಿಚಾರವನ್ನು ಪಕ್ಷದ ಶಾಸಕರಿಗೆ ಮತ್ತು ಪಕ್ಷದ ವರಿಷ್ಠರಿಗೆ ಬಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಬಿಜೆಪಿ ವಿರುದ್ಧ ಮೊದಲ ಬಾರಿಗೆ ಬಹಿರಂಗವಾಗಿ ವಾಗ್ದಾಳಿ ಮಾಡಿದರು.
ಜೆಡಿಎಸ್
ಇತರೆ
ನಾಯಕರ
ಅಭಿಪ್ರಾಯ
:
- ಬಿಜೆಪಿಗೆ ಅಧಿಕಾರ ಕೊಟ್ಟು ನಾವು ಪಾಪ ಮಾಡೋದಿಲ್ಲ : ವೈ.ಎಸ್. ದತ್ತ.
- ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು : ಮೆರಾಜುದ್ದೀನ್ ಪಟೇಲ್, ಜೆಡಿಎಸ್ ರಾಜ್ಯಾಧ್ಯಕ್ಷ
- ಅಂಥ ಧರ್ಮರಾಯನೇ ಸುಳ್ಳು ಹೇಳಿದ್ದಾನೆ.. : ಎಂ.ಪಿ.ಪ್ರಕಾಶ್, ಗೃಹ ಸಚಿವ
(ದಟ್ಸ್ ಕನ್ನಡ ವಾರ್ತೆ)