2420ನಿವೃತ್ತ ಉಪನ್ಯಾಸಕರಿಗೆ ಮತ್ತೆ ಕೆಲಸ : ಹೊರಟ್ಟಿ
ಬೆಂಗಳೂರು, ಸೆ.27 : ರಾಜ್ಯದಲ್ಲಿನ ಪದವಿ ಪೂರ್ವ ಕಾಲೇಜುಗಳ ಸಂಖ್ಯೆ ಬೆಳೆದಿದೆ. ಆದರೆ ಉಪನ್ಯಾಸಕರ ಸಂಖ್ಯೆ ಇದ್ದಷ್ಟೇ ಇದೆ. ಸುಮಾರು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಕಂಡು ಬಂದಿದೆ. ಈ ಮಧ್ಯೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಹೀಗಾಗಿ ನಿವೃತ್ತ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಸದ್ಯದಲ್ಲೇ ತಾತ್ಕಾಲಿಕವಾಗಿ 2420ಹುದ್ದೆಗಳನ್ನು ತುಂಬುತ್ತೇವೆ. ನಿವೃತ್ತ ಉಪನ್ಯಾಸಕರಿಗೆ ಮಾಸಿಕ 5ಸಾವಿರ ರೂ. ಗೌರವ ಧನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಸಿಇಟಿ ಮುಖಾಂತರ ಉಪನ್ಯಾಸಕರ ನೇಮಕಾತಿ ನಡೆಯಲಿದೆ. ಕೆಪಿಎಸ್ ಸಿ ಈ ಪ್ರಕ್ರಿಯೆ ಮುಗಿಸಲು ಇನ್ನೂ ಐದಾರು ತಿಂಗಳು ಬೇಕಾಗುತ್ತದೆ. ಅಲ್ಲಿಯ ತನಕ ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲೆಂದು, ನಿವೃತ್ತ ಉಪನ್ಯಾಸಕರ ಸೇವೆಯನ್ನು ಸರ್ಕಾರ ಬಳಸಿಕೊಳ್ಳಲಿದೆ ಎಂದು ಹೊರಟ್ಟಿ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)