ತಾಕತ್ತಿದ್ದರೆ ಈ ಸರಣಿಯಲ್ಲಿ ಸೋಲಿಸಿ : ಧೋನಿಗೆ ರಿಕಿ ಸೆಡ್ಡು
ನವದೆಹಲಿ, ಸೆ.27 : ಭಾರತ ಕ್ರಿಕೆಟ್ ತಂಡ ಟ್ವೆಂಟಿ20 ವಿಶ್ವಕಪ್ ಗೆದ್ದಿರಬಹುದು. ಆದರೆ ನಾವು ಟೆಸ್ಟ್ ಮತ್ತು 50 ಓವರ್ಗಳ ಪಂದ್ಯದಾಟದಲ್ಲಿ ವಿಶ್ವ ಚಾಂಪಿಯನ್. ನಮ್ಮನ್ನು ಸೋಲಿಸುವುದು ಕಷ್ಟಕರ ಎಂದು ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಎಚ್ಚರಿಕೆ ನೀಡಿದ್ದಾರೆ.
ಟ್ವೆಂಟಿ20 ವಿಶ್ವಕಪ್ ಗಳಿಸಿರುವ ಭಾರತದ ಮೇಲೆ ಅಪಾರ ನಿರೀಕ್ಷೆಗಳಿವೆ. ಅವರ ಮೇಲೆಯೇ ಹೆಚ್ಚಿನ ಒತ್ತಡವಿದೆ. ಟ್ವೆಂಟಿ20ಯನ್ನು ನಾವೇನು ಅಂಥ ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದು ರಿಕಿ ಪಾಂಟಿಂಗ್ ಉಡಾಫೆಯ ಮಾತಾಡಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದ ಸರಣಿಯಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಸ್ಟ್ರೇಲಿಯಾದವರು ಆಡುತ್ತಿದ್ದು, ಮೊದಲ ಪಂದ್ಯ ಸೆಪ್ಟೆಂಬರ್ 29ರಂದು ಬೆಂಗಳೂರಿನಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ.
ಪಾಂಟಿಂಗ್ ಮಾತಿಗೆ ರಿವರ್ಸ್ ಸ್ವಿಂಗ್ ಎಸೆದಿರುವ ಭಾರತದ ಬೌಲರ್ ಶ್ರೀಶಾಂತ್, ಈ ಸರಣಿ ಜಯ ಅವರ ಪಾಲಿಗೆ ಸುಲಭವೆಂದು ತಿಳಿದಿದ್ದರೆ ಆಸ್ಟ್ರೇಲಿಯನ್ನರು ಕನಸು ಕಾಣುತ್ತಿರಬಹುದು. ನಮ್ಮ ತಂಡದ ಎಲ್ಲ 15 ಆಟಗಾರರಲ್ಲಿ ಪಂದ್ಯ ಗೆಲ್ಲಿಸುವ ತಾಕತ್ತಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟ್ವೆಂಟಿ20ಯಲ್ಲಂತೂ ಅವರು ನಮ್ಮ ವಿರುದ್ಧ ಸೋತಿದ್ದಾರೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಬರೀ ಬಾಯಿ ಮಾತಿನಿಂದ ಗೆಲ್ಲುತ್ತೇವೆಂದು ಹೇಳಿದರೆ ಗೆದ್ದಂತಾಗುವುದಿಲ್ಲ. ಪ್ರತಿ ಗೆಲುವಿಗೆ ಅವರು ಸೆಣಸಾಡಬೇಕಾಗುತ್ತದೆ ಎಂದು ಶ್ರೀಶಾಂತ್ ಸವಾಲು ಹಾಕಿದ್ದಾರೆ.
ಭಾರತೀಯ ಆಟಗಾರರು ಒತ್ತಡದಲ್ಲಿದ್ದಾರೆ ಎಂಬ ಪಾಂಟಿಂಗ್ ಮಾತನ್ನು ತಳ್ಳಿಹಾಕಿರುವ ಆರಂಭಿಕ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ, ಭಾರತ ತಂಡ ಉತ್ತಮವಾಗಿ ಆಡುತ್ತಿದೆ. ಆಸ್ಟ್ರೇಲಿಯಾ ತಂಡವನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದ ಪಿಯೂಶ್ ಚಾವ್ಲಾ ಮತ್ತು ಆಸ್ಟ್ರೇಲಿಯಾ ಪರ ಶೇನ್ ವ್ಯಾಟ್ಸನ್ ಗಾಯದಿಂದಾಗಿ ಸರಣಿಯಿಂದ ಹಿಂದೆ ಸರಿದಿದ್ದಾರೆ.
ಏಕದಿನದ ಸರಣಿಯ ಪಂದ್ಯಗಳ ವಿವರ ಇಲ್ಲಿದೆ.
(ಏಜೆನ್ಸಿ)