ಗ್ಲಾಸ್ಗೋ ದಾಳಿ ತನಿಖೆ : ಕತ್ತಲೆಯಲ್ಲಿ ಬೆಂಗಳೂರು ಪೊಲೀಸರು
ಬೆಂಗಳೂರು, ಆಗಸ್ಟ್ 04 : ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ನಡೆದ ವಿಫಲ ದಾಳಿ ಯತ್ನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಬಗ್ಗೆ ನಗರ ಪೊಲೀಸರಿಗೆ ಕಿಂಚಿತ್ತೂ ಸುಳಿವಿಲ್ಲ.
ಈಗ ನಡೆಯುತ್ತಿರುವ ತನಿಖೆಗಳಿಂದ ಅಂಥ ಯಾವುದೇ ಆಸಕ್ತಿಕರ ವಿಷಯ ಕಂಡುಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್.ಅಚ್ಯುತರಾವ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನವರೇ ಆದ ಹೊತ್ತಿ ಉರಿಯುತ್ತಿದ್ದ ಜೀಪು ನುಗ್ಗಿಸಿದ ಮತ್ತು ಗುರುವಾರ ಕೊನೆಯುಸಿರೆಳೆದ ಪ್ರಮುಖ ಆರೋಪಿ ಕಫೀಲ್, ಸಂಚಿನ ಸುಳಿವಿದ್ದ ಆತನ ಸಹೋದರ ಸಬೀಲ್ ಮತ್ತು ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಪೊಲೀಸರಿಂದ ಬಂಧಮುಕ್ತನಾದ ಡಾಕ್ಟರ್ ಹನೀಫ್ ತನಿಖೆಗೆ ಸಂಬಂಧಿಸಿದಂತೆ ಲಂಡನ್ ಪೊಲೀಸರಾಗಲಿ ಆಸ್ಟ್ರೇಲಿಯಾದ ಪೊಲೀಸರಾಗಲಿ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಂಚಿನಲ್ಲಿ ಹನೀಫ್ ಪಾತ್ರ ಕುರಿತಂತೆ ಬೆಂಗಳೂರಿನ ಪೊಲೀಸರೇ ಆಸ್ಟ್ರೇಲಿಯಾ ಫೆಡರಲ್ ಪೊಲೀಸರಿಗೆ ಸುಳಿವು ನೀಡಿದ್ದನ್ನು ಅವರು ಅಲ್ಲಗಳೆದರು.
ಈ ಕುರಿತಾಗಿ ಯಾವುದೇ ವಿದೇಶಿ ಏಜೆನ್ಸಿಗೆ ಸಂದೇಶ ಕಳಿಸಿಲ್ಲ ಎಂದು ಅಚ್ಯುತರಾವ್ ತಿಳಿಸಿದರು.
ಸಬೀಲ್ ಮನೆಯಿಂದ ಜಪ್ತಿ ಮಾಡಲಾದ ಕಂಪ್ಯೂಟರ್ ಹಾರ್ಡ್ಡಿಸ್ಕ್ನಲ್ಲಿ ಏನಿದೆಯೆಂದು ನಮಗಿನ್ನೂ ತಿಳಿದಿಲ್ಲ. ಹೈದರಾಬಾದ್ನ ಸೆಂಟ್ರಲ್ ಫೋರೆನ್ಸಿಕ್ ರಿಸರ್ಚ್ ಲ್ಯಾಬೊರೇಟರಿ ಅದನ್ನು ಇನ್ನೂ ಅಭ್ಯಸಿಸುತ್ತಿದೆ ಎಂದು ಅವರು ಹೇಳಿದರು.
(ಯುಎನ್ಐ)