ರಾಜ್ಯ ಕಾಂಗ್ರೆಸ್ ಸದಸ್ಯರನ್ನು ಭೇಟಿ ಮಾಡಿದ ಪ್ರತಿಭಾ
ಬೆಂಗಳೂರು : ಯುಪಿಎ ಮತ್ತು ಎಡಪಕ್ಷಗಳ ನಾಮಾಂಕಿತ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ಇಂದು ರಾಜ್ಯ ಕಾಂಗ್ರೆಸ್ನ ವಿಧಾನಸಭಾ ಸದಸ್ಯರನ್ನು ಭೇಟಿ ಮಾಡಿದರು.
ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತ, ಚುನಾವಣೆಯಲ್ಲಿ ತಮಗೆ ಯಶಸ್ಸು ದೊರೆತರೆ ಅದು ಇಡೀ ದೇಶದ ಜನತೆಗೆ ಸಂದ ಜಯವಾಗಲಿದೆ ಎಂದು ಅವರು ಸಾರಿದರು.
ಎಲ್ಲ ಜನರಿಗೂ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯ ದೊರಕಿಸುವಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯದ ಭರವಸೆ ನೀಡುವ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಅವರು ನುಡಿದರು.
ಬಿಜೆಪಿ ಸೇರಿದಂತೆ ಇತರ ಎನ್ಡಿಎ ಪಕ್ಷಗಳು ತಮ್ಮ ವಿರುದ್ಧ ಹೊರಿಸುತ್ತಿರುವ ಆರೋಪಗಳಿಂದ ತಾವು ಎಂದೂ ವಿಚಲಿತರಾಗುವುದಿಲ್ಲ. ಇಂಥ ಅನೇಕ ಸವಾಲುಗಳನ್ನು ಎದಿರಿಸಿದ್ದೇನೆ. ದೇಶ ಮತ್ತು ಜನರಿಗಿರುವ ಬದ್ಧತೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಪ್ರತಿಭಾ ಹೇಳಿದರು.
ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಮಾತನಾಡಿ, ರಾಷ್ಟ್ರಪತಿ ಹುದ್ದೆಗಾಗಿ ಒಬ್ಬ ಮಹಿಳೆಯನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರಿಸುತ್ತಿರುವುದಕ್ಕೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದರು.
ಬಿಜೆಪಿ ಪ್ರತಿಭಟನೆ : ಪ್ರತಿಭಾ ಪಾಟೀಲ್ ಅವರು ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಘೋಷಣೆ ಕೂಗುತ್ತಾ ಗಾಂಧಿ ಪ್ರತಿಮೆ ಎದಿರು ಬಿಜೆಪಿ ಯುವಮೋರ್ಚಾ ಪ್ರತಿಭಟಿಸಿದರು. ನಗರದ ಎಲ್ಲೆಡೆ ಪ್ರತಿಮಾ ವಿರುದ್ಧದ ಘೋಷಣೆಗಳೂ ರಾರಾಜಿಸುತ್ತಿದ್ದವು.
(ದಟ್ಸ್ ಕನ್ನಡ ವಾರ್ತೆ)