ಮದುವೆ ಸರಳವಾಗಿರಲಿ, ಧಾಂಧೂಂ ಆಚರಣೆಗೆ ಕಡಿವಾಣ ಬೀಳಲಿ
ಬೆಂಗಳೂರು : ಮದುವೆ ಸಮಾರಂಭಗಳನ್ನು ಸರಳವಾಗಿಸಲು ಮತ್ತು ದುಂದುವೆಚ್ಚ ನಿಯಂತ್ರಿಸಲು ಕಾನೂನು ತರಬೇಕೆಂದು ರಾಜ್ಯ ವಿಧಾನಸಭಾ ಸದಸ್ಯರು ಪಕ್ಷಬೇಧ ಮರೆತು ಒಕ್ಕೊರಲಿನ ಬೇಡಿಕೆ ಇಟ್ಟಿದ್ದಾರೆ.
ಖಾಸಗಿ ಸದಸ್ಯರ ಮಸೂದೆ ಮಂಡನೆ ಸಂದರ್ಭದಲ್ಲಿ ಈ ಕುರಿತು ಚರ್ಚೆಗೆ ನಾಂದಿ ಹಾಡಿದ ವಾಟಾಳ್ ನಾಗರಾಜ್ ಅವರು, ಬೆಂಗಳೂರು ಮತ್ತೆಡೆಗಳಲ್ಲಿ ಮದುವೆ ಛತ್ರಗಳು ಸಿಕ್ಕಾಪಟ್ಟೆ ಸುಲಿಗೆ ಮಾಡುತ್ತಿವೆ ಎಂದು ರೇಗಾಡಿದರು.
ದುಬಾರಿ ಛತ್ರಗಳಿಂದಾಗಿ ಹಳೆಯ ಸಾಂಪ್ರದಾಯಿಕ ಮದುವೆಗಳು ಬೆಲೆ ಕಳೆದುಕೊಳ್ಳುತ್ತಿವೆ ಎಂದು ವಿಷಾದಿಸಿದರು.
ಮದುವೆಯನ್ನು ಶ್ರೀಮಂತಿಕೆಯ ಪ್ರದರ್ಶನವನ್ನಾಗಿ ಮಾಡಿರುವ ಸಿರಿವಂತ ಕುಟುಂಬಗಳು ಆದಾಯ ತೆರಿಗೆ ಇಲಾಖೆಯಿಂದ ಪರವಾನಗಿಯನ್ನು ಪಡೆದಿರಬೇಕೆಂದು ರಮೇಶ್ ಕುಮಾರ್ ಪಟ್ಟು ಹಿಡಿದರು.
ಇಂಥ ವೈಭವೋಪೇತ ಮದುವೆಗಳು ನಾಗರಿಕ ಸಮಾಜದಲ್ಲಿ ಸಾಮಾನ್ಯ ಜನರಿಗೆ ಮಾಡುವ ಅಪಮಾನ ಎಂದು ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉದ್ಭವಿಸಿರುವ ಪ್ರವಾಹ ಸ್ಥಿತಿ ಕುರಿತು ಈಮೊದಲು ಚರ್ಚಿಸಲಾಯಿತು. ಈ ಚರ್ಚೆಗೆ ಸೋಮವಾರ ಸರ್ಕಾರದಿಂದ ಉತ್ತರ ದೊರೆಯಲಿದೆ.
(ದಟ್ಸ್ ಕನ್ನಡ ವಾರ್ತೆ)