ನಾಯಿ ಸಂಹಾರ : ರಾಕ್ಷಸ ವರ್ತನೆಗೆ ರಾಜ್ಯಪಾಲರ ಬೇಸರ
ಬೆಂಗಳೂರು : ರಾಜಧಾನಿ ನಗರ ಮತ್ತು ಮೈಸೂರಿನಲ್ಲಿ ನಡೆಯುತ್ತಿರುವ ನಾಯಿ ಸಂಹಾರ ಕಾರ್ಯಕ್ರಮಕ್ಕೆ ರಾಜ್ಯಪಾಲರು ಬೇಸರ ವ್ಯಕ್ತಪಡಿಸಿ, ಮುಖ್ಯಮಂತ್ರಿಗೆ ಪತ್ರಬರೆದಿದ್ದಾರೆ.
ನಾಯಿಗಳ ಕಾಟ ನಿವಾರಣೆಗೆ ವೈಜ್ಞಾನಿಕ ವಿಧಾನಗಳಿವೆ. ಅಕ್ರಮ ಮಾಂಸದಂಗಡಿ ತೆರವು ಮತ್ತು ನೈರ್ಮಲ್ಯ ಕಾಪಾಡುವ ಮೂಲಕ ಬೀದಿನಾಯಿಗಳ ಕಾಟ ನಿವಾರಿಸಬಹುದು. ನಾಯಿಗಳ ದಾಳಿಯಿಂದ ಮಕ್ಕಳು ಸತ್ತಿರುವ ಘಟನೆಗೆ ಸ್ಥಳೀಯ ಸಂಸ್ಥೆಗಳ ವೈಫಲ್ಯವೇ ಕಾರಣ. ಹೀಗಾಗಿ ಅಮಾನವೀಯವಾಗಿ ನಾಯಿಗಳನ್ನು ಸೆರೆಹಿಡಿಯುವುದು ಮತ್ತು ಕೊಲ್ಲುವುದು ಸಲ್ಲದು. ರಾಜ್ಯ ಸರ್ಕಾರದ ಕ್ರಮ ನಮಗೆ ಬೇಸರ ತಂದಿದೆ ಎಂದು ರಾಜ್ಯಪಾಲ ಟಿ.ಎನ್.ಚತುರ್ವೇದಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಪ್ರತಿಭಟನೆ : ನಾಯಿಗಳ ಹತ್ಯೆಗೆ ಪ್ರಚೋದನೆ ನೀಡಿದ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಪ್ರಾಣಿ ದಯಾ ಸಂಘಗಳು, ಪತ್ರಿಕೆ ಮತ್ತು ಟೀವಿ ಚಾನೆಲ್ಗಳ ಮುಂದೆ ಪ್ರತಿಭಟನೆ ನಡೆಸಿವೆ.
ಮಕ್ಕಳ ಸಾವಿಗೆ ಕಾರಣವಾದ ನಾಯಿಗಳ ಬಗ್ಗೆ ನಮಗೂ ಸಿಟ್ಟಿದೆ. ಹೀಗೆಂದು ಎಲ್ಲಾ ಬೀದಿನಾಯಿಗಳನ್ನು ಕೊಲ್ಲುವುದು ಸಲ್ಲದು. ಹುಚ್ಚು ಮತ್ತು ತೊಂದರೆ ನೀಡುವ ನಾಯಿಗಳನ್ನಷ್ಟೇ ಸೆರೆಹಿಡಿದು, ಕೊಂದರೆ ನಮ್ಮದೇನೂ ಅಭ್ಯಂತವಿಲ್ಲ ಎಂದು ಸಂಘಟನೆಗಳು ಹೇಳಿವೆ.
ನಾಯಿ ಸೆರೆ ಸ್ಥಗಿತ : ಸೆರೆ ಹಿಡಿದ ನಾಯಿಗಳನ್ನಿಡಲು ಜಾಗವಿಲ್ಲದ ಕಾರಣ, ಸದ್ಯಕ್ಕೆ ರಾಜಧಾನಿಯಲ್ಲಿ ನಾಯಿಗಳ ಸೆರೆ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಮಹಾನಗರ ಪಾಲಿಕೆ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)