ತುರುಸುಗೊಂಡ ವೈದ್ಯರ ಮುಷ್ಕರ, ಇಂದು ರಾಷ್ಟ್ರಪತಿ ಜೊತೆ ಭೇಟಿ
ತುರುಸುಗೊಂಡ ವೈದ್ಯರ ಮುಷ್ಕರ, ಇಂದು ರಾಷ್ಟ್ರಪತಿ ಜೊತೆ ಭೇಟಿ
ರೋಗಿಗಳಿಗೆ ಸಂಕಷ್ಟ, ವೈದ್ಯರ ಬಿಗಿಪಟ್ಟು, ಸರ್ಕಾರದ ಮೌನ
ಮುಷ್ಕರದ ಪರಿಣಾಮವಾಗಿ ಕೆ.ಆರ್.ಆಸ್ಪತ್ರೆ, ಚೆಲುವಾಂಬಾ ಆಸ್ಪತ್ರೆ ಹಾಗೂ ಜೆಎಸ್ಎಸ್ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡಬೇಕಾಯಿತು. ಮೀಸಲಾತಿ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳು ಇನ್ನೊಂದೆಡೆ ಬೀದಿ ನಾಟಕಗಳನ್ನು ಪ್ರದಶಿಸಿದರು.
ದೆಹಲಿ ವರದಿ : ಹಿಂದಳಿದ ವರ್ಗಕ್ಕೆ ಶೇಕಡಾ 27ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವು ವಿರೋಧಿಸಿ, ದೇಶಾದ್ಯಂತ ವೈದ್ಯರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ.
ಗುರುವಾರ ಎಐಐಎಂಎಸ್ ಬೋಧಕ ಸಿಬ್ಬಂದಿ ಚಳವಳಿ ನಿರತ ವಿದ್ಯಾರ್ಥಿಗಳ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎಐಐಎಂಎಸ್ ಬೋಧಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಕೆ.ಹಂಡಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸರ್ಕಾರದ ನೀತಿಯನ್ನು ನಾವು ಖಂಡಿಸುತ್ತೇವೆ. ಅಲ್ಲದೆ ಈ ನಿಟ್ಟಿನಲ್ಲಿ ನಾವು ವಿದ್ಯಾರ್ಥಿಗಳ ಬೆಂಬಲಕ್ಕಿದ್ದೇವೆ ಎಂದು ಹೇಳಿದರು.
ಆನಂತರ ವೈದ್ಯರು, ವಿದ್ಯಾರ್ಥಿಗಳು ಹಾಗೂ ಬೋಧಕರನ್ನೊಳಗೊಂಡ 9ಜನರ ನಿಯೋಗ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ಕಲಾಂ ಅವರನ್ನು ಭೇಟಿ ಮಾಡಿ, ಈಗ ಸಿದ್ಧಪಡಿಸಿರುವ ಮೀಸಲಾತಿ ನಿಯಮ ಪರಾಮರ್ಶಿಸಲು ರಾಜಕೀಯವಲ್ಲದ ನ್ಯಾಯಿಕ ಆಯೋಗ ರಚಿಸಬೇಕು ಎಂದು ಒತ್ತಾಯಿಸಿತು.
ನಗರದ ಬಹುತೇಕ ಮಾರುಕಟ್ಟೆ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಎಐಐಎಂಎಸ್ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆ ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಒಳರೋಗಿಗಳ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಮುಷ್ಕರದ ಪರಿಣಾಮ ರೋಗಿಗಳು ಬಂದ ದಾರಿಗೆ ಸುಂಕವಿಲ್ಲವೆಂದು ಮನೆಗೆ ತೆರಳುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
(ಯುಎನ್ಐ)
ಮುಖಪುಟ / ವಾರ್ತೆಗಳು












Click it and Unblock the Notifications