ನಿಸಾರ್ ಅಹಮದ್ರ ಮೂರು ಪುಸ್ತಕಗಳಿಗೆ ಮರು ಮುದ್ರಣ ಯೋಗ
ನಿಸಾರ್ ಅಹಮದ್ರ ಮೂರು ಪುಸ್ತಕಗಳಿಗೆ ಮರು ಮುದ್ರಣ ಯೋಗ
ಬೇಸಗೆಯ ಧಗೆಯಲ್ಲೊಂದು ತಂಪು ಸಮಾರಂಭ. ಏ.15ರಂದು ನಿಸಾರರ ನವೋಲ್ಲಾಸ, ಅಚ್ಚುಮೆಚ್ಚು , ಬರೀ ಮರ್ಯಾದಸ್ಥರೆ ಕೃತಿಗಳ ಮರು ಮುದ್ರಣ ಆವೃತ್ತಿ ಬಿಡುಗಡೆಯಾಗಲಿದೆ.
- ಕೆ.ಎಸ್.ಮುರಳಿ, ಬೆಂಗಳೂರು
ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಮೂರು ಜನಪ್ರಿಯ ಪುಸ್ತಕಗಳನ್ನು ಬೆಂಗಳೂರಿನ ವಸಂತ ಪ್ರಕಾಶನ ಮರು ಮುದ್ರಿಸಿದೆ.
ಮರು ಅಚ್ಚು ಕಂಡ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 15 ರ ಗುರುವಾರ ಸಂಜೆ 6ಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡ್ ಕಲ್ಚರ್ (ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ) ಸಭಾಂಗಣದಲ್ಲಿ ನಡೆಯಲಿದೆ.
ಬಿಡುಗಡೆಯಾಗಲಿರುವ ಪುಸ್ತಕಗಳು:
- ನವೋಲ್ಲಾಸ (ಭಾವಗೀತಗಳು)
- ಅಚ್ಚುಮೆಚ್ಚು (ಆಯ್ದ ಗದ್ಯ ಬರಹಗಳು)
- ಬರೀ ಮರ್ಯಾದಸ್ಥರೆ(ಪಾಬ್ಲೊ ನೆರುಡನ ಭಾಷಾಂತರಿಕ ಪದ್ಯಗಳು)
ಬಿಡುಗಡೆಗೊಳ್ಳಲಿರುವ ಪುಸ್ತಕದ ಬಗ್ಗೆ : ಪ್ರಕಟವಾಗಿ ಅನೇಕ ವರ್ಷಗಳೇ ಆದ, ನವೋಲ್ಲಾಸ(ಭಾವಗೀತಗಳು), ಅಚ್ಚುಮೆಚ್ಚು (ಇದೇ ಹೆಸರಿನ ಬೃಹತ್ ಹೊತ್ತಗೆಯಿಂದ ಆಯ್ದ ಗದ್ಯ ಬರಹಗಳ ಸಂಕಲನ) ಮತ್ತು ಬರೀ ಮರ್ಯಾದಸ್ಥರೆ ಎನ್ನುವ ಈ ಮೂರು ಹೊತ್ತಗೆಗಳು ಆಕರ್ಷಕ ಮುಖಪುಟದೊಂದಿಗೆ ಮರು ಅಚ್ಚು ಕಾಣುತ್ತಿವೆ.
ಬಹು ಭಾವಸಂಪನ್ನವೂ, ಚಿಂತನಶೀಲವೂ, ದೀರ್ಘಾಯುಷಿಯೂ ಆದ ಕಾವ್ಯತ್ವವನ್ನು ಬಲಿಗೊಡದ ಅಂತರ್ಮುಖತೆಯ ಮಾರ್ಗಕ್ಕೆ ಒಲಿದ ಸೊಗಸಾದ ಕಾವ್ಯಸಂಕಲನ ನವೋಲ್ಲಾಸ.
ನಿಸಾರ್ ಗದ್ಯ ರೂಪದಲ್ಲಿ ಕಂಡ ಕನ್ನಡ ನಾಡು ಅಚ್ಚುಮೆಚ್ಚು ಆಯ್ದ ಗದ್ಯಬರಹಗಳ ಸಂಕಲನ. ಇಲ್ಲಿವರು ಜನರನ್ನು ಕಾಣುತ್ತಾರೆ, ಪ್ರಕೃತಿ-ಪರಿಸರವನ್ನು ಕಾಣುತ್ತಾರೆ, ಹಿರಿಯರನ್ನು ಕಾಣುತ್ತಾರೆ. ತಮ್ಮ ಕವಿಹೃದಯ ಕಂಡು ಅನುಭವಿಸಿ ಮೆಚ್ಚಿದ ಅಚ್ಚೊತ್ತುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಈ ಲೇಖನಗಳು ತುಷಾರ ಮಾಸಿಕದಲ್ಲಿ ಅಂಕಣಬರಹಗಳಾಗಿ ಪ್ರಕಟವಾಗಿದ್ದವು.
ದಕ್ಷಿಣ ಅಮೇರಿಕದ ಚಿಲಿಯಲ್ಲಿ ಹುಟ್ಟಿದ ಪಾಬ್ಲೊ ನೆರುಡ, ತನ್ನ ದೇಶದ ಅರಾಜಕತೆ, ಅಸಮತೆ, ಕಾರ್ಪಣ್ಯ, ಸಾಮಾಜಿಕ ವೈಷಮ್ಯ, ರಾಜಕೀಯ ತುಮುಲಗಳು, ಗುಡ್ಡಗಾಡು, ದಟ್ಟ ಅರಣ್ಯ, ಪ್ರಾಚೀನ ಆಚಾರವಿಚಾರಗಳು, ಬಡತನ -ಇವೆಲ್ಲ ಬದುಕು, ಬರಹ ಮತ್ತು ಕಾವ್ಯಗಳ ಮಿಂಚನ್ನು ನಿಸಾರ್ ಬರೀ ಮರ್ಯಾದಸ್ಥರೆ ಕೃತಿಯಲ್ಲಿ ಸೊಗಸಾಗಿ ಕನ್ನಡಿಸಿದ್ದಾರೆ.
ಮುಖಪುಟ / ವಾರ್ತೆಗಳು












Click it and Unblock the Notifications