ಕೃಷ್ಣಯ್ಯಾ, ಮೈಸೂರು ಶಾಲೆ ಯಶಸ್ವಿ ಅನ್ನದಾಸೋಹವ ನೋಡಯ್ಯಾ!
ಕೃಷ್ಣಯ್ಯಾ, ಮೈಸೂರು ಶಾಲೆ ಯಶಸ್ವಿ ಅನ್ನದಾಸೋಹವ ನೋಡಯ್ಯಾ!
ಇದು ಸರ್ಕಾರದ ಭೋಳೇ ಯೋಜನೆಯಲ್ಲ, ಜನರ ಕಿಮ್ಮತ್ತಿನ ಕಳಕಳಿ
ಮೊನ್ನೆ ತಾನೇ 100ನೇ ಬರ್ತಡೇ ಆಚರಿಸಿಕೊಂಡ ದೇವರಾಜ ಸರ್ಕಾರಿ ಶಾಲೆಯಲ್ಲಿ ಅಂಗನವಾಡಿಯಿಂದ ಹಿಡಿದು ಆರನೇ ಇಯತ್ತೆಯ ಮಕ್ಕಳಿಗೆ ನಿತ್ಯ ಅನ್ನ ದಾಸೋಹ. ಊಟ ಮಾಡುವವರ ಪೈಕಿ ತಮಿಳು ಮಾಧ್ಯಮದ 45 ಮಕ್ಕಳೂ ಇದ್ದಾರೆ.
ಮೈಸೂರು ನಗರದ ಕಾರ್ಪೊರೇಟರ್ ನಾಗಭೂಷಣ್ (ಜಾತ್ಯತೀತ ಜನತಾ ದಳ) ಹೇಳುವಂತೆ ಸಾರ್ವಜನಿಕರು ಈ ಯೋಜನೆಯಲ್ಲಿ ತೊಡಗಿಕೊಂಡಿರುವ ಕಾರಣಕ್ಕೆ ಇದು ಯಶಸ್ವಿಯಾಗಿದೆ. ಸಂತೆಪೇಟೆಯ ಸಗಟು ಧಾನ್ಯ ಮಾರಾಟಗಾರರು ಉತ್ತಮ ಗುಣಮಟ್ಟದ ಅಕ್ಕಿಯನ್ನು ದಾನ ಮಾಡುತ್ತಾರೆ. ಒಂದೊಂದು ದಿನ ಒಂದೊಂದು ಅಂಗಡಿಯವರು ತರಕಾರಿ ಕೊಡುತ್ತಾರೆ. ಸಂತೆಪೇಟೆಯ ಮತ್ತೊಂದು ಅಂಗಡಿಯವರು ಬೇಳೆ ಕೊಡುತ್ತಾರೆ. ಹೀಗೆ ಹನಿ ಹನಿ ಸೇವೆ ಅನ್ನ ದಾಸೋಹದ ಹಳ್ಳವಾಗುತ್ತಿದೆ.
ದೇವರಾಜ ಶಾಲೆ ಎರಡು ವರ್ಷದ ಹಿಂದೆ ದುಸ್ಥಿತಿಯಲ್ಲಿತ್ತು. ಶಾಲೆಯನ್ನು ದತ್ತು ತೆಗೆದುಕೊಳ್ಳುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದ್ದೇ ತಡ, ಅದರ ಲಾಭ ಪಡೆಯಲು ಕಾರ್ಪೊರೇಟ್ ನಾಗಭೂಷಣ ಆಸಕ್ತರಾದರು. ಇವತ್ತು ಈ ಶಾಲೆ ಇಡೀ ಜಿಲ್ಲೆಗೆ ಮಾದರಿಯಾಗಿ ರೂಪುಗೊಂಡಿದೆ.
ಹಾಗಾದರೆ ವಾಂತಿ- ಭೇದಿ ಮಾಡಿಸುತ್ತಿರುವ ಸರ್ಕಾರದ ಅಕ್ಷರ ದಾಸೋಹ ಯಶಸ್ವಿಯಾಗಿ ಬದಲಾಗಲು ಏನು ಮಾಡಬೇಕು?
ಈ ಪ್ರಶ್ನೆಗೆ ನಾಗಭೂಷಣ ಅವರು ಕೊಡುವ ಉತ್ತರ ಹೀಗಿದೆ- ದೊಡ್ಡ ಪ್ರಮಾಣದ ಯೋಜನೆಯನ್ನು ಸರ್ಕಾರ ಒಂಟಿಯಾಗಿ ಅನುಷ್ಠಾನಕ್ಕೆ ತಂದಾಗ ಹೀಗಾಗುತ್ತದೆ. ಬದಲಿಗೆ ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರು ಇಂತಹ ಯೋಜನೆಗಳಿಗೆ ಸಹಾಯ ಹಸ್ತ ನೀಡಬೇಕು. ಆಗ ಕಳಪೆ ಅಕ್ಕಿಯ ಜಾಗಕ್ಕೆ ಗುಣಮಟ್ಟದ ಅಕ್ಕಿ ಬರುತ್ತದೆ. ಅಡುಗೆ ಮಾಡುವವರ ವಿಷಯದಲ್ಲಿ ವ್ಯಾಜ್ಯ ಹುಟ್ಟುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಸ್ಥಳೀಯ ಮಟ್ಟದಲ್ಲಿ ಒಗ್ಗಟ್ಟು ಇರಬೇಕು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications