ಶಿರಹಟ್ಟಿ ಬಾರಿಗೆ ಬರವೇ ವರ, ರೈತರಿಗೆ ಗುಂಡು ದಾಸ್ಯದ ಜ್ವರ
ಶಿರಹಟ್ಟಿ ಬಾರಿಗೆ ಬರವೇ ವರ, ರೈತರಿಗೆ ಗುಂಡು ದಾಸ್ಯದ ಜ್ವರ
ಹೊಲದ ಕೆಲಸವಿಲ್ಲದ ರೈತರು ಕುಡಿಯೋದನ್ನೇ ಫುಲ್ಟೈಂ ಕೆಲಸ ಮಾಡಿಕೊಂಡಿದ್ದಾರೆ
ಶಿರಹಟ್ಟಿಯಲ್ಲಿ ಕೈತುಂಬಾ ಕೆಲಸವಿದ್ದಾಗ, ದಿನವಿಡೀ ಹೊಲಗಳಲ್ಲಿ ದುಡಿದು ಸಂಜೆ ಒಂದಿಷ್ಟು ಸಾರಾಯಿ ಕುಡಿದು ಮಲಗುತ್ತಿದ್ದ ರೈತರು ಈಗ ಬಾರುಗಳತ್ತ ಮುಖಮಾಡಿದ್ದಾರೆ. ಬರ ಅತಿಯಾದ ಕಾರಣ ಮಾಡೋಕೆ ಕೆಲಸವಿಲ್ಲ. ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗುವ ಜಾಯಮಾನದವರು ಇವರಲ್ಲ. ಗುಳೇ ಹೊರಡಲು ಮನಸ್ಸು ಒಪ್ಪೋಲ್ಲ. ಈವರೆಗೆ ಕೂಡಿಟ್ಟ ಅಷ್ಟೋ ಇಷ್ಟೋ ಹಣವನ್ನು ಬಿಂದಾಸ್ ಖರ್ಚು ಮಾಡೋಕೆ ಶುರುವಿಟ್ಟುಕೊಂಡಿದ್ದಾರೆ. ಮನೆಯಲ್ಲಿ ಹೊಟ್ಟೆಗೆ ಹಿಟ್ಟಿಲ್ಲ ಅನ್ನುವಂಥಾ ಸ್ಥಿತಿಯಿದ್ದರೂ ಇವರ ಗುಂಡು ದಾಸ್ಯ ಪರಮಾವಧಿ ಮುಟ್ಟಿದೆ.
ಕೃಷಿ ಕೆಲಸಗಳಲ್ಲಿ ರೈತರು ತೊಡಗಿರುತ್ತಿದ್ದ ಕಾಲದಲ್ಲಿ ಶಿರಹಟ್ಟಿಯ ಬಾರುಗಳಿಗೆ ದಿನಕ್ಕೆ ಅಬ್ಬಬ್ಬಾ ಅಂದರೆ ಎಂಟು ಸಾವಿರ ರುಪಾಯಿ ವ್ಯಾಪಾರವಾಗುತ್ತಿತ್ತು. ಆದರೀಗ 15- 20 ಸಾವಿರ ರುಪಾಯಿ ಗಲ್ಲಾ ತುಂಬುತ್ತಿದೆ !
ಸಂಕಷ್ಟದ ಸಮಯದಲ್ಲೂ ರೈತರಿಗೆ ಕುಡಿಯಲು ಆಪಾಟಿ ಹಣ ಎಲ್ಲಿಂದ ಸಿಗುತ್ತದೆ ಅಂತ ಬಾರಿನವರನ್ನೇ ಕೇಳಿ ನೋಡಿದರೆ, ಎಷ್ಟು ಸಾಧ್ಯವೋ ಅಷ್ಟೂ ಸಾಲ ಮಾಡುತ್ತಾರೆ. ಇನ್ನು ಕೆಲವರು ಉಳಿಸಿಟ್ಟಿರುವ ಹಣವನ್ನು ತಂದಾದರೂ ಸರಿ ಕುಡಿಯುತ್ತಾರೆ ಎಂದು ಉತ್ತರಿಸುತ್ತಾರೆ. ನೀರಿಗೆ ನಡೆಯುವಷ್ಟು ದೂರ ಬೀರಿಗೆ ನಡೆಯಬೇಕಾಗಿಲ್ಲ ಅನ್ನೋದು ಶಿರಹಟ್ಟಿಯಲ್ಲಿ ಹುಟ್ಟಿಕೊಂಡಿರುವ ಜೋಕು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications