ಗೌಡರಿಗೆ ಚುಂಚನಗಿರಿ ಸ್ವಾಮೀಜಿ ಮುಸುಕಿನ ಗುದ್ದು
ಬೆಂಗಳೂರು : ಆದಿಚುಂಚನಗಿರಿ ಮಠದ ವಿರುದ್ಧ ಧ್ವನಿ ಎತ್ತಿರುವವರಿಗೆ ಮಠದ ಭಕ್ತರೇ ಪಾಠ ಕಲಿಸುತ್ತಾರೆ ಎಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಾರ್ಮಿಕವಾಗಿ ಹೇಳಿದ್ದಾರೆ.
ರೈತರ ಹೆಸರು ಹೇಳಿಕೊಂಡು ಎತ್ತರಕ್ಕೆ ಬೆಳೆದಿರುವ ವ್ಯಕ್ತಿ ರೈತರಿಗಾಗಿ ತಾನು ಏನು ಮಾಡಿದ್ದೇನೆ ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಪ್ರಧಾನಿ ದೇವೇಗೌಡರ ಹೆಸರು ಪ್ರಸ್ತಾಪಿಸದೆ ಬಾಲಗಂಗಾಧರನಾಥ ಸ್ವಾಮೀಜಿ ನುಡಿದರು. ಅವರು ಲೋಕಸೇವಾ ಪ್ರತಿಷ್ಠಾನದ ಭಾನುವಾರದ ಸಮಾರಂಭದಲ್ಲಿ ಭಾಗಿಯಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಮಠದ ಟೀಕಾಕಾರರ ಕುರಿತು ಪ್ರತಿಕ್ರಿಯಿಸಿದರು.
ಮಠ ಶ್ರೀಮಂತರ ಪರ, ಹೈಟೆಕ್ ಎಂದು ಟೀಕಿಸುವವರು ಹತ್ತು ಜನಕ್ಕೆ ಅನ್ನ ನೀಡುವಂಥ ಒಂದಾದರೂ ಸಂಸ್ಥೆ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಸ್ವಾಮೀಜಿ- ಚುಂಚನಗಿರಿ ಮಠದ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ.90 ಮಕ್ಕಳು ಬಡವರು ಎಂದು ಸ್ಪಷ್ಟಪಡಿಸಿದರು.
ತಾವು ಯಾವುದೇ ರಾಜಕೀಯ ಪಕ್ಷದೊಂದಿಗೂ ಗುರ್ತಿಸಿಕೊಂಡಿಲ್ಲ . ಯಾರು ಸಮಾರಂಭಕ್ಕೆ ಕರೆದರೂ ಹೋಗುತ್ತೇನೆ. ಅದೇ ರೀತಿ ಮುಖ್ಯಮಂತ್ರಿ ಕೃಷ್ಣ ಅವರ ಕಾವೇರಿ ಪಾದಯಾತ್ರೆ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆ ಎಂದು ಸ್ವಾಮೀಜಿ ತಿಳಿಸಿದರು.
ವೈದ್ಯಕೀಯ ಸೀಟು ಕೊಡಲಿಲ್ಲ , ತಾವು ಹೇಳಿದವರನ್ನು ವರ್ಗಾವಣೆ ಮಾಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ಟೀಕಿಸುತ್ತಿರುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಸ್ವಾಮೀಜಿ ವ್ಯಂಗ್ಯವಾಗಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications