ಮಂದಿರ : ಕಾಯ್ದೆ ರಚನೆಗೆ ವಿಶ್ವೇಶತೀರ್ಥರ ಆಗ್ರಹ
ಉಡುಪಿ : ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಕಾಯ್ದೆ ರಚಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಸಹಕರಿಸಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ರಾಮ ಮಂದಿರ ನಿರ್ಮಾಣದ ವಿಷಯ ಯಾವುದೇ ಪರಿಹಾರ ಸೂತ್ರವಿಲ್ಲದ ಸಮಸ್ಯೆಯಾಗೇ ಮುಂದುವರೆದರೆ ಹಿಂದೂ ಹಾಗೂ ರಾಮ ಮಂದಿರ ಪರ ಚಳವಳಿಯನ್ನು ಚುರುಕುಗೊಳಿಸಬೇಕಾಗುತ್ತದೆ. ಈಗಾಗಲೇ ಗುಜರಾತ್ನಲ್ಲಿ ಕಲಿಸಿದಂತೆ ರಾಜಕೀಯ ಪಕ್ಷಗಳಿಗೆ ಪಾಠವನ್ನೂ ಕಲಿಸಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.
ಈ ಹಿಂದೆ ಸುಪ್ರಿಂಕೋರ್ಟಿನ ತೀರ್ಪಿಗೆ ವಿರುದ್ಧವಾಗಿ ‘ಶಾ ಬನೋ’ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಕಾಯ್ದೆಯಾಂದನ್ನು ರಚಿಸಿತ್ತು. ಅಲ್ಪಸಂಖ್ಯಾಕರನ್ನು ಓಲೈಸಲು ಕಾಂಗ್ರೆಸ್ ಸರ್ಕಾರ ಇಂತಹ ಕಾಯ್ದೆ ರಚಿಸಿರುವ ಉದಾಹರಣೆಯಿರುವಾಗ, ಹಿಂದೂ ಸಮುದಾಯದ ಭಾವನೆಗಳನ್ನು ಕಾಪಾಡಲು ಯಾಕೆ ಇನ್ನೊಂದು ಕಾಯ್ದೆಯನ್ನು ರಚಿಸಬಾರದು ಹೇಳಿ ಎಂದು ವಿಶ್ವೇಶತೀರ್ಥರು ಪ್ರಶ್ನಿಸಿದರು.
ರಾಮ ಮಂದಿರ ತೆರೆಯಲು ಅನುಮತಿ ಕೊಟ್ಟು, ಆ ನಂತರ ದೇವಳದಲ್ಲಿ ಶಿಲಾನ್ಯಾಸಕ್ಕೂ ಕಾಂಗ್ರೆಸ್ ಸರ್ಕಾರ ಅವಕಾಶ ಕೊಟ್ಟಿತು. ಆಗ ಇಷ್ಟೆಲ್ಲ ಮಾಡಿದ ಕಾಂಗ್ರೆಸ್, ಈಗ ಅಯೋಧ್ಯೆಯ ವಿವಾದಿತ ಜಾಗೆಯನ್ನು ರಾಮ ಜನ್ಮಭೂಮಿ ನ್ಯಾಸ್ಗೆ ಹಸ್ತಾಂತರಿಸುವ ವಿಷಯದಲ್ಲಿ ತುಟಿ ಪಿಟಿಕ್ಕನ್ನದಿರುವುದು ದುರಂತ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...