ಕೊಂಕಣಿ ಭಾಷೆ ಮಾತಾಡುವವರಿಗೆ ಒಂದು ರಾಜ್ಯ ಬೇಕು -ಡಾ.ತಾನಾಜಿ
ಮಂಗಳೂರು: ಕೊಂಕಣಿ ಅಧಿಕೃತ ಭಾಷೆಯಾಗಿರುವ ರಾಜ್ಯಕ್ಕಾಗಿ ಹೋರಾಡುವ ಸಮಯ ಹತ್ತಿರವಾಗಿದೆ ಎಂದು ಅಖಿಲ ಭಾರತ ಕೊಂಕಣಿ ಅಧಿವೇಶನದ ಅಧ್ಯಕ್ಷ ಡಾ. ತಾನಾಜಿ ಹಳರಣಕರ ಹೇಳಿದ್ದಾರೆ.
ಅಮ್ಮೆಂಬಳ ಸುಬ್ಬರಾವ್ ಪೈ ವೇದಿಕೆಯಲ್ಲಿ ಅಖಿಲ ಭಾರತ ಕೊಂಕಣಿ ಪರಿಷತ್ನ 23ನೇ ಅಧಿವೇಶನದ ಅಧ್ಯಕ್ಷತೆ ವಹಿಸಿ ತಾನಾಜಿ ಮಾತನಾಡುತ್ತಿದ್ದರು. ಗೋವಾದಲ್ಲಿ ಕೊಂಕಣಿ ಭಾಷೆಯನ್ನು ರಾಜ್ಯಭಾಷೆಯೆಂದು ಪರಿಗಣಿಸಲಾಗಿದೆ. ಆದರೆ ಕಳೆದ ಒಂದುವರೆ ದಶಕದಿಂದಲೂ ಇದು ಜಾರಿಗೆ ಬಂದಿಲ್ಲ. ನೆರೆಯ ರಾಜ್ಯದಲ್ಲಿಯೂ ಕೊಂಕಣಿ ಮಾತನಾಡುವ ಜನರಿದ್ದಾರೆ. ಕೊಂಕಣಿಗೆ ರಾಜಕೀಯ ಬೆಂಬಲ ಇನ್ನೂ ದೊರೆತಿಲ್ಲ . ಅದಕ್ಕಾಗಿ ಹೋರಾಡಬೇಕಾಗಿದೆ ಎಂದು ತಾನಾಜಿ ಹೇಳಿದರು.
ಜಾತಿ ,ಧರ್ಮ , ಪ್ರದೇಶ ಮುಂತಾದ ಅಡೆ ತಡೆಗಳನ್ನು ಮೀರಿ ನಡೆಯುತ್ತಿರುವ ಕೊಂಕಣಿ ಚಳವಳಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಂದ ನಿಂತು ಹೋಗಬಾರದು. ಕೊಂಕಣಿ ಭಾಷೆ, ಕಲೆ , ಸಾಹಿತ್ಯಕ್ಕೆ ಸರಿಯಾದ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಕೊಂಕಣಿ ಸಮುದಾಯ ಹೋರಾಡಬೇಕು ಎಂದು ತಾನಾಜಿ ಕರೆಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...