ರಾಜಕೀಯದಿಂದ ನಿವೃತ್ತಿ- ಹೆಗಡೆ, ಒಪ್ಪೊಲ್ಲ - ಸಂಯುಕ್ತ ಜನತಾದಳ
ಬೆಂಗಳೂರು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿಯಲ್ಲಿ ಸಂಸತ್ತು ಪ್ರವೇಶಿಸುತ್ತಿದ್ದಂತೆಯೇ, ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಕ್ರಿಯ ರಾಜಕಾರಣಕ್ಕೆ ಕೊನೆಯ ಸಲಾಂ ಹೇಳಿದ್ದಾರೆ.
75 ನೇ ಹುಟ್ಟು ಹಬ್ಬದ ಸಂದರ್ಭದಲ್ಲೇ ನಿವೃತ್ತಿ ನಿರ್ಧಾರ ಪ್ರಕಟಿಸಬೇಕು ಅಂದುಕೊಂಡಿದ್ದೆ. ಆದರೆ, ಮಿತ್ರರು ಅವಕಾಶ ಮಾಡಿಕೊಡಲಿಲ್ಲ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಕೃಷ್ಣ ಹೆಗಡೆ ತಿಳಿಸಿದರು. ಒಂದು ವಯಸ್ಸಾದ ನಂತರ ರಾಜಕಾರಣ ಮಾತ್ರವಲ್ಲ , ಸಾರ್ವಜನಿಕ ಜೀವನದಿಂದಲೂ ನಿವೃತ್ತಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಜನತಾದಳಗಳ ಉಭಯ ಬಣಗಳ ವಿಲೀನದ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ ಹೆಗಡೆ, ವಿಲೀನಕ್ಕೆ ಮುನ್ನ ಉಭಯ ಬಣಗಳ ನಾಯಕರು ತಮ್ಮ ಪೂರ್ವಾಗ್ರಹಗಳನ್ನು ತೊಡೆದುಹಾಕಬೇಕಿದೆ. ಹಳೆಯದನ್ನು ಮರೆತು ವಿಲೀನವಾಗಬೇಕು ಎಂದರು. ಕನಕಪುರ ಚುನಾವಣೆಯಲ್ಲಿ ದೇವೇಗೌಡರ ಗೆಲುವಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಹೆಗಡೆ, ಗೌಡರ ಗೆಲುವಿನ ಲಾಭವನ್ನು ಪಕ್ಷ ಪಡೆಯಬೇಕು ಎಂದರು.
ನಿವೃತ್ತಿ ಒಪ್ಪೊಲ್ಲ : ಹೆಗಡೆಯವರ ರಾಜಕೀಯ ನಿವೃತ್ತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ . ಅವರ ಮಾರ್ಗದರ್ಶನ ಜನತಾ ಪರಿವಾರಕ್ಕೆ ಅತ್ಯಗತ್ಯ ಎಂದು ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಸಿ.ಭೈರೇಗೌಡ ತಿಳಿಸಿದ್ದಾರೆ. ಹೆಗಡೆ ಅವರ ಮಾರ್ಗದರ್ಶನ ಪಕ್ಷಕ್ಕೆ ಮುಂದುವರಿಯುವ ಬಗ್ಗೆ ಸಂಯುಕ್ತ ಜನತಾದಳದ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಅವರೂ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications