ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ.. ಇರುವುದೊಂದೇ ರಾಷ್ಟ್ರ ನಿನಗೆ, ಅದನ್ನು ರಕ್ಷಿಸಿಕೊ...

By Staff
|
Google Oneindia Kannada News

ಬೆಂಗಳೂರು : ಹಿಂದೂಗಳದು ಪುಟ್ಟ ಜಗತ್ತು . ಆದರೆ, ಹಿಂದೂ ಚರಿತ್ರೆ, ಸಂಸ್ಕೃತಿ ದೊಡ್ಡದು ಹಾಗೂ ಸಮೃದ್ಧವಾದುದು. ಹಿಂದೂ ರಾಷ್ಟ್ರ ರಕ್ಷಣೆಗೆ ನಾವೆಲ್ಲ ಒಂದಾಗಬೇಕು; ಸ್ವಯಂ ಸೇವಕರಾಗಬೇಕು. ಜಾತಿ, ಧರ್ಮ ಯಾವುದೂ ಸ್ವಯಂ ಸೇವಕರಾಗಲು ಅಡ್ಡ ಬರಬಾರದು.

- ಇದು ಆರೆಸ್ಸೆಸ್‌ ನಿಲುವು. ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಅವರದೂ ಇದೇ ಒಲವು. ರಾಜಧಾನಿಯ ನಾಗವಾರದಲ್ಲಿನ ಮಾನ್ಯತಾ ನಗರದಲ್ಲಿ ಶುಕ್ರವಾರದಿಂದ ಆರಂಭವಾದ ಸಮರಸತಾ ಸಂಗಮದ್ದೂ ಇದೇ ಸಂಕಲ್ಪ !

ಹಿಂದೂಗಳು ಸ್ವಯಂ ರಕ್ಷಣೆ ಮಾಡಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ ಚುಂಚನಗಿರಿ ಶ್ರೀಗಳು, ಅಲ್ಪ ಸಂಖ್ಯಾತರ ವಿಶೇಷ ಸ್ಥಾನಮಾನ ರದ್ದು ಪಡಿಸಲು ಆಗ್ರಹಿಸಿದರು. ಆರೆಸ್ಸೆಸ್‌ ಕಾರ್ಯಕ್ರಮದ ಮುಂಚೂಣಿಯಲ್ಲಿ ಕಾಣಿಸಿಕೊಂಡ ಸ್ವಾಮೀಜಿ ಹಿಂದೂಧರ್ಮ ಉಳಿಸಲು ಕಂಕಣ ತೊಡುವಂತೆ ಧರ್ಮೀಯರಿಗೆ ಕರೆ ನೀಡಿದರು.

ಸಮರಸತಾ ಸಂಗಮದಲ್ಲಿ ಕೇಳಿಸಿದ್ದೇನು?

  1. ಮುಸಲ್ಮಾನರಿಗೆ, ಕ್ರೆೃಸ್ತರಿಗೆ ದೇಶ ಬಿಟ್ಟು ಹೋಗಲು ಇನ್ನೊಂದು ದೇಶವಿದೆ. ಹಿಂದೂಗಳಿಗೆ ಇರುವುದೊಂದೇ ರಾಷ್ಟ್ರ. ಅದನ್ನು ರಕ್ಷಿಸಿಕೊಳ್ಳಬೇಕು- ಬಾಲಗಂಗಾಧರನಾಥ ಸ್ವಾಮೀಜಿ.
  2. ಆಕ್ರಮಣ ಮಾಡಲು ಬರುವವರ ಎದೆ ನಡುಗುವಂತೆ ನಾವೆಲ್ಲ ಒಗ್ಗಟ್ಟಾಗಬೇಕು. ಅದಕ್ಕಾಗಿ ಜಾತಿ,ಮತ, ಧರ್ಮ, ಭಾಷೆಗಳನ್ನು ಮೀರಬೇಕು. ನಮ್ಮ ನಡವಳಿಕೆ ಹಾಗೂ ವ್ಯವಹಾರಗಳಲ್ಲಿ ಹಿಂದೂ ಭಾವನೆ ತೋರಬೇಕು- ಹೊ.ವೆ.ಶೇಷಾದ್ರಿ, ಆರೆಸ್ಸೆಸ್‌ ಸಹ ಕಾರ್ಯದರ್ಶಿ.
  3. ಆರೆಸ್ಸೆಸ್‌ ಬೋಧಿಸುವ ಹಿಂದೂ ಧರ್ಮ ಕೇವಲ ಧಾರ್ಮಿಕ ರೂಪದ್ದಲ್ಲ , ಅದು ಬಹು ಸಂಸ್ಕೃತಿಗಳ ಮಿಶ್ರಣದ ಪಾಕ- ಕೆ.ಎಸ್‌.ಸುದರ್ಶನ್‌, ಆರೆಸ್ಸೆಸ್‌ ಮುಖ್ಯಸ್ಥ.
ಶಿಸ್ತೆಂದರೆ ಶಿಸ್ತು ...

ಸಮ್ಮೇಳನದಲ್ಲಿ ಮೇಲು ಕೀಳೆನ್ನುವ ಬೇಧಭಾವವೇ ಇಲ್ಲ . ಎಲ್ಲಿ ನೋಡಿದರೂ ಒಡೆದು ಕಾಣುವ ಶಿಸ್ತು . ಉನ್ನತ ನಾಯಕರಿಂದ ಸಾಮಾನ್ಯ ಕಾರ್ಯಕರ್ತನವರೆಗೆ ಎಲ್ಲರೂ ಸಮಾನರು. ಎಲ್ಲರದೂ ಒಂದೇ ಸಮವಸ್ತ್ರ : ಖಾಕಿ ನಿಕ್ಕರ್‌, ಅರ್ಧ ತೋಳಿನ ಬಿಳಿ ಅಂಗಿ ಹಾಗೂ ಕಪ್ಪು ಟೋಪಿ. ಸಮಾರಂಭದಲ್ಲಿ ಭಿನ್ನರಾಗಿ ಕಾಣುತ್ತಿದ್ದುದು ಸ್ವಾಮೀಜಿ ಮಾತ್ರ. ಅವರದು ಕಾವಿ ಸಮವಸ್ತ್ರ .

ಕೇರಳ ಶೈಲಿಯ ಪಂಚವಾದ್ಯಗಳನ್ನು ಮೊಳಗಿಸುವ ಮೂಲಕ ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ವೇದಿಕೆಗೆ ಕರೆ ತರಲಾಯಿತು. ಸಹಸ್ರಾರು ಕಂಠಗಳಿಂದ ಹೊರಹೊಮ್ಮಿದ ನಮಸ್ತೆ ಸದಾವತ್ಸಲೆ ಗೀತೆಯಿಂದ ಕಾರ್ಯಕ್ರಮಕ್ಕೆ ಚಾಲನೆ. ಭಾರತ ಮಾತೆಗೆ ಸ್ವಾಮೀಜಿ ಅವರಿಂದ ಪುಷ್ಪಾಂಜಲಿ.

ಪಥ ಸಂಚಲನಕ್ಕೆ ವ್ಯಾಪಕ ಭದ್ರತೆ

ಶನಿವಾರ ಗಣರಾಜ್ಯೋತ್ಸವ. ಸಮರಸತಾ ಸಮಾವೇಶದಲ್ಲಿ ರಾಷ್ಟ್ರ ಧ್ವಜಾರೋಹಣ. ಸಂಜೆ ನಗರದ ಆಯ್ದ ಬೀದಿಗಳಲ್ಲಿ ಆರೆಸ್ಸೆಸ್‌ ಕಾರ್ಯಕರ್ತರಿಂದ ಪಥ ಸಂಚಲನ. ಮಾರ್ಗದುದ್ದಕ್ಕೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗದಂತೆ ಕಾರ್ಯಕರ್ತರದೇ ಉಸ್ತುವಾರಿ ವ್ಯವಸ್ಥೆ . ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆಯೂ ನಡೆದಿದೆ. ರಾಜ್ಯದ ವಿವಿಧ ಭಾಗಗಳಿಂದ ಪೊಲೀಸ್‌ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಭಾನುವಾರ ಸಮಾವೇಶದ ಅಂತಿಮ ದಿನ.

(ಇನ್ಫೋ ಇನ್‌ಸೈಟ್‌)

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ- ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X