ರಸ್ತೆ ಗುಂಡಿ ಮುಚ್ಚೋವರೆಗೆ ಪಗಾರ ಬೇಡ : ಪಾಲಿಕೆಯಲ್ಲಿ ಪ್ರತಿಜ್ಞೆ
ಬೆಂಗಳೂರು : ನಗರದ ರಸ್ತೆ ಗುಂಡಿಗಳನ್ನು ಮುಚ್ಚುವವರೆಗೆ ನಾವು ಪಗಾರ ತಗೊಳ್ಳೋದಿಲ್ಲ ಎಂದು ಮಹಾನಗರ ಪಾಲಿಕೆ ಎಂಜಿನಿಯರುಗಳು ಪ್ರತಿಜ್ಞೆ ಮಾಡಿದ್ದಾರೆ.
ಬೆಂಗಳೂರಿನ ನೂತನ ಮೇಯರ್ ಚಂದ್ರಶೇಖರ್ ಮತ್ತು ಆಯುಕ್ತ ಅಶೋಕ್ ದಳವಾಯಿ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಮಂಗಳವಾರ ಪಾಲಿಕೆ ಎಂಜಿನಿಯರುಗಳ ಸಭೆ ನಡೆಸಿ, ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ ಚರ್ಚಿಸಲಾಗಿತ್ತು.
ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದ ಎಂಜಿನಿಯರುಗಳಿಗೆ ದಂಡ ಹಾಕುವ ಪದ್ಧತಿ ಈಗ ಜಾರಿಯಲ್ಲಿದೆ. ದಂಡ ಹಾಕುವ ಬೆದರಿಕೆಯಿಂದ ಕೆಲಸ ಮಾಡಿಸುವುದು ನಮಗೆ ಇಷ್ಟವಿಲ್ಲ. ಎಂಜಿನಿಯರುಗಳಲ್ಲಿ ಕೆಲಸದ ಬಗ್ಗೆ ತಂತಾನೇ ಶ್ರದ್ಧೆ ಇರಬೇಕು ಎಂಬ ಮಾತು ಸಭೆಯಲ್ಲಿ ಕೇಳಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರುಗಳು ಈ ತಿಂಗಳಿಂದಲೇ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಕೆಲಸ ಮುಗಿಯುವವರೆಗೆ ಸಂಬಳ ಬೇಡ. ಪ್ರಮುಖ ರಸ್ತೆಗಳನ್ನು ಗುರ್ತಿಸಿ, ಪಟ್ಟಿ ಪ್ರಕಟಿಸಲಾಗುವುದು. ಇದಾದ 15 ದಿನಗಳೊಳಗೆ ಕಾಮಗಾರಿ ಮುಗಿಯಲಿದೆ ಎಂದು ಟೊಂಕ ಕಟ್ಟಿದರು. ಅವರ ಪ್ರಯತ್ನ ಕೈಗೂಡಲಿ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...