ಪ್ರಶಸ್ತಿಗಳ ವಿಲೇವಾರಿ ಮಾಡುವ ರಾಣಿ ಸತೀಶ್ಗೆ ಪ್ರಶಸ್ತಿ ಇಲ್ವಾ ?
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಪ್ರಶಸ್ತಿಗಳ ಬೇಡಿಕೆ ಅರ್ಜಿಗಳನ್ನು ನಿಭಾಯಿಸಿ ಸುಸ್ತಾಗಿ ಬಿಟ್ಟಿದ್ದಾರಂತೆ.
ಹಲವು ಸಮಾರಂಭಗಳಲ್ಲಿ ಪ್ರಶಸ್ತಿಗೆ ಎಷ್ಟು ಸಾವಿರ ಅರ್ಜಿ ಬಂದಿದೆ ಎಂಬ ಬಗ್ಗೆ ಹೇಳಿಕೊಂಡು ಆಯ್ಕೆಯ ಕಷ್ಟವನ್ನು ವಿವರಿಸುತ್ತಿದ್ದ ಸಚಿವೆ ಈ ಅರ್ಜಿಗಳನ್ನು ಸ್ವೀಕರಿಸಿ ತಾವು ಸುಸ್ತಾಗಿರುವುದಾಗಿ ಹೇಳಿದ್ದಾರೆ. ಅವರು ಗುರುವಾರ ಇಲ್ಲಿನ ವನಿತಾ ಸಾಹಿತ್ಯ ವೇದಿಕೆಯಲ್ಲಿ ವನಿತಾಶ್ರೀ ಪ್ರಶಸ್ತಿ ವಿತರಣೆ ಮಾಡಿ ಮಾತನಾಡುತ್ತಿದ್ದರು.
ಪ್ರಶಸ್ತಿ ಪಡೆಯುವ ಆಸೆಯಿಂದ ಯಾಪಾಟಿ ಅರ್ಜಿಗಳು ಬರುತ್ತಿವೆ ಎಂದರೆ ಅವುಗಳನ್ನು ಪರಿಶೀಲಿಸಿ ನನಗೆ ಸಾಕೋ ಸಾಕಾಯ್ತು. ಈ ಪ್ರಶಸ್ತಿಯ ಬೇಡಿಕೆ, ಒತ್ತಡಗಳನ್ನು ತಡೆದುಕೊಂಡಿರುವುದಕ್ಕೆ ನನಗೇ ಒಂದು ಪ್ರಶಸ್ತಿ ನೀಡಬೇಕು ಎಂದು ಸಚಿವೆ ತಮ್ಮ ಕಷ್ಟ ತೋಡಿಕೊಂಡರು.
ಪ್ರಶಸ್ತಿ ಬಂದರೆ ಸಂತೋಷವಾಗುತ್ತದೆ ಹೌದು. ಆದರೆ ಈ ಪ್ರಶಸ್ತಿಗಾಗಿ ಏನೆಲ್ಲಾ ಮಾರ್ಗ ಬಳಸುವ, ಶತಾಯ ಗತಾಯ ಪ್ರಯತ್ನಿಸುವ ಪ್ರವೃತ್ತಿಯ ಬಗ್ಗೆ ರಾಣಿ ಸತೀಶ್ ಬೇಜಾರು ಮಾಡಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...