ಯಾವುದೇ ಕ್ಷಣದಲ್ಲಿ ನಕ್ಕೀರನ್ ಗೋಪಾಲ್ ಬಂಧನ ಸಾಧ್ಯತೆ
* ನಾಗೇಂದ್ರ ಪ್ರಸಾದ್, ನಂಜನಗೂಡು
ಮೈಸೂರು : ಕನ್ನಡದ ವರನಟ ಡಾ. ರಾಜ್ಕುಮಾರ್ ಅಪಹರಣದ ಸಂಚು ರೂಪಿಸಿದ್ದರೆನ್ನಲಾದ ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್.ಆರ್. ಗೋಪಾಲ್ ಅವರನ್ನು ಬಂಧಿಸಲು ಎಸ್.ಟಿ.ಎಫ್. ಪೊಲೀಸರು ಸಜ್ಜಾಗಿದ್ದಾರೆ. ಯಾವುದೇ ಕ್ಷಣದಲ್ಲಿ ಗೋಪಾಲ್ ಬಂಧನ ಆಗಬಹುದು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಗೋಪಾಲ್ರನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹೊತ್ತು ಕೊಳ್ಳೆಗಾಲ ಪೊಲೀಸರ ವಶದಲ್ಲಿರುವ ಟಿಎನ್ಎಲ್ಎ ಉಗ್ರರು ನೀಡಿರುವ ಹೇಳಿಕೆಯ ಆಧಾರದ ಮೇಲೆ ಗೋಪಾಲ್ರನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಚಿಂತಿಸುತ್ತಿದ್ದಾರೆ.
ಈ ಮಧ್ಯೆ ರಾಜ್ ಅಪಹರಣ ಕಾಲದಲ್ಲಿ ಕಾಡಿನಿಂದ ನಾಡಿಗೆ ಓಡಿಬಂದ ನಾಗಪ್ಪ ಮಾರಡಗಿ ಸಹ ರಾಜ್ ಅಪಹರಣದಲ್ಲಿ ಗೋಪಾಲ್ ಕೈವಾಡವಿದೆ ಎಂಬುದನ್ನು ಬೆಂಗಳೂರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾರಿಸಾರಿ ಹೇಳಿದ್ದಾರೆ.
ಪ್ರಚೋದನಾತ್ಮಕ ಯೋಜನೆ ತಯಾರಿಸಿದ, ಅಪಹರಣ ತಂತ್ರ ರೂಪಿಸಿದ ಆರೋಪದ ಮೇಲೆ ಗೋಪಾಲ್ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಬಗ್ಗೆ ಎಸ್.ಟಿ.ಎಫ್. ಗಂಭೀರವಾಗಿ ಚಿಂತಿಸುತ್ತಿದೆ. ಕಾಡಿನಲ್ಲಿ ಗೋಪಾಲ್ ತಮ್ಮ ಮೇಲೆ ಹಲ್ಲೆ ನಡೆಸಿದರು, ಕೊಲ್ಲಲು ಪ್ರಯತ್ನಿಸಿದರು ಎಂದು ಹೇಳಿರುವ ನಾಗಪ್ಪ ಮಾರಡಗಿ, ದೂರು ದಾಖಲಿಸಿದರೆ, ನಕ್ಕೀರನ್ ಗೋಪಾಲ್ ಬಂಧನ ಸುಲಭವಾಗುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಒಂದೊಮ್ಮೆ ಮಾರಡಗಿ ದೂರು ನೀಡದಿದ್ದರೂ, ಉಗ್ರರು ನೀಡಿರುವ ಹೇಳಿಕೆ ಆಧರಿಸಿಯೇ ಗೋಪಾಲ್ರನ್ನು ಬಂಧಿಸಲು ಅವಕಾಶವಿದೆ ಎಂದೂ ಅವರು ಹೇಳಿದ್ದಾರೆ.
ಮುಖಪುಟ / ವೀರಪ್ಪನ್ ಶಿಕಾರಿ