ಶೇ. 23ರಷ್ಟು ವಿದ್ಯುತ್ ದರ ಏರಿಕೆ ಪ್ರಸ್ತಾಪ: ಅಲ್ಲಂ ಸಮರ್ಥನೆ
ಬಳ್ಳಾರಿ : ವಿದ್ಯುತ್ ದರವನ್ನು ಶೇ.23.52ರಷ್ಟು ಏರಿಸುವಂತೆ ಕೋರಿ ಕೆಪಿಟಿಸಿಎಲ್, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಸಮರ್ಥಿಸಿಕೊಂಡಿದ್ದಾರೆ.
ಪ್ರಸಕ್ತ ಸನ್ನಿವೇಶದಲ್ಲಿ ಆದಾಯ ಮತ್ತು ವೆಚ್ಚ ಸರಿದೂಗಿಸಲು ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದೂ ಅವರು ಪ್ರತಿಪಾದಿಸಿದ್ದಾರೆ. ವಾಲ್ಮೀಕಿ ಜಯಂತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ಇಲ್ಲಿಗೆ ಆಗಮಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹಾಗೂ ರೈತರಿಗೆ ಹೆಚ್ಚಿನ ತೊಂದರೆಯಾಗದು ಎಂದೂ ಹೇಳಿದರು.
ರಾಜ್ಯದಲ್ಲಿ ಈ ವರ್ಷ ಮಳೆ ಕೈಕೊಟ್ಟ ಕಾರಣ, ಪ್ರಮುಖ ಜಲಾಶಯಗಳು ಬರಿದಾಗಿವೆ. ವಿದ್ಯುತ್ ಉತ್ಪಾದನೆ ಕುಸಿದಿದೆ. ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಹೊರ ರಾಜ್ಯದಿಂದ ವಿದ್ಯುತ್ ಖರೀದಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಅವರು ವಿವರಿಸಿದರು.
ದರ ಏರಿಕೆ ಪ್ರಸ್ತಾವದ ವಿವರ : ವಿದ್ಯುತ್ ದರ ಕಡಿತ ಜಾರಿಯಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಶೇ.15ರಷ್ಟು ರಿಯಾಯಿತಿ ನೀಡಬೇಕು. ಆದಾಯ ತೆರಿಗೆ, ವೃತ್ತಿ ತೆರಿಗೆ ಪಾವತಿದಾರರು, ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಗಳ ನೌಕರರ ಕೃಷಿ ಪಂಪ್ಸೆಟ್ಗಳನ್ನು ಎಲ್ಟಿ 4(ಬಿ) ಎಂದು ಪರಿಗಣಿಸಬೇಕು.
ಆ ಪ್ರಕಾರವಾಗಿ ಪ್ರತಿ ಎಚ್ಪಿಗೆ 1800 ರುಪಾಯಿ ಅಥವಾ ಪ್ರತಿ ಯೂನಿಟ್ಗೆ 3 ರು. ದರ ವಿಧಿಸಬೇಕು. ರೈತರು ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿದಲ್ಲಿ ವಿಶೇಷ ದರ ನಿಗದಿ ಮಾಡಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸಲ್ಲಿಸಿರುವ ಪ್ರಸ್ತಾವದಲ್ಲಿ ಶಿಫಾರಸು ಮಾಡಲಾಗಿದೆ.
ವಾಣಿಜ್ಯ ಮಳಿಗೆ - ಅಂಗಡಿ - ಗುಡಿಕೈಗಾರಿಕೆಗಳ ವಿದ್ಯುತ್ ದರದಲ್ಲಿ ಇರುವ ತಾರತಮ್ಯ ನಿವಾರಿಸುವಂತೆ ಕೂಡ ಶಿಫಾರಸಿನಲ್ಲಿ ಪ್ರಸ್ತಾಪಿಸಲಾಗಿದೆ. ನಿಗಮದ ಆರ್ಥಿಕ ಸುಧಾರಣೆ, ಪ್ರಸರಣ ಮತ್ತು ವಿದ್ಯುತ್ ಜಾಲ ಅಭಿವೃದ್ಧಿಗೆ ಬೆಲೆ ಏರಿಕೆ ಕ್ರಮ ಅನಿವಾರ್ಯವಾಗಿದೆ ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...