‘ಬುದ್ಧಂ ಶರಣಂ ಗಚ್ಛಾಮಿ...’ ಅಕ್ಕ ನಾಟಕೋತ್ಸವಕ್ಕೆ ಪರದೆ
ಮೈಸೂರು : ರವೀಂದ್ರನಾಥ ಠಾಗೋರರ ‘ನರ್ತಕಿ ಪೂಜೆ ’ ಮತ್ತು ಗಿರೀಶ್ ಕಾರ್ನಾಡರ ‘ನಾಗಮಂಡಲ’ ನಾಟಕದೊಂದಿಗೆ ಕಳೆದ ಏಳು ದಿನಗಳ ಕಾಲ ನಗರದಲ್ಲಿ ನಡೆದ ‘ಅಕ ್ಕ ರಾಷ್ಟ್ರೀಯ ಮಹಿಳಾ ನಾಟಕೋತ್ಸವ’ದ ಸಮಾರೋಪ ಸಮಾರಂಭ ಭಾನುವಾರ ಸಂಜೆ ನಡೆಯಿತು.
ಮೈಸೂರಿನ ಹವ್ಯಾಸಿ ಕಲಾವಿದರು ಎರಡೂ ನಾಟಕಗಳನ್ನು ನಡೆಸಿಕೊಟ್ಟರು. ಕಿಕ್ಕಿರಿದ ಭೂಮಿಗೀತ ಕಲಾ ಮಂದಿರದಲ್ಲಿ ನರ್ತಕಿ ಪೂಜೆ ನಾಟಕ ‘ಬುದ್ಧಂ ಶರಣಂ ಗಚ್ಛಾಮಿ’ ಎಂಬ ಘೋಷದೊಂದಿಗೆ ಮುಕ್ತಾಯವಾಗುತ್ತಿದ್ದಂತೆಯೇ ನಾಟಕೋತ್ಸವಕ್ಕೆ ತೆರೆ ಬಿತ್ತು.
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆಗಳು, ಹೆಣ್ಣು ಶಿಶು ಮಾರಾಟ, ಸಂವೇದನೆಗಳು ಮತ್ತು ಸಮಾಜದಲ್ಲಿರುವ ದುಷ್ಟಪದ್ಧತಿಗಳನ್ನು ಬಿಂಬಿಸಿದ ‘ಅಕ್ಕ’ ಮಹಿಳಾ ನಾಟಕೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆದವು.
ಕೇಂದ್ರ ಸರಕಾರದ ‘ಮಹಿಳಾ ಸಬಲೀಕರಣ ವರ್ಷ’ದ ಅಂಗವಾಗಿ ರಾಜ್ಯದ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಈ ನಾಟಕೋತ್ಸವದಲ್ಲಿ ಲಕ್ಷ್ಮೀ ಚಂದ್ರಶೇಖರ್ ಅವರ ‘ಸಿಂಗಾರವ್ವ ಮತ್ತು ಅರಮನೆ’, ಮುಂಬಯಿಯ ಹೆಸರಾಂತ ‘ಏಕ್ ಜೂಟ್ ’ತಂಡದ ನಾದಿರಾ ಬಬ್ಬರ್ ನಿರ್ದೇಶನದ ‘ಸಂಧ್ಯಾ ಛಾಯಾ’ ನಾಟಕ ಪ್ರಮುಖವಾದುವು.
ಈ ಅವಧಿಯಲ್ಲಿ ದೇಶದ ಪ್ರಖ್ಯಾತ ತಂಡಗಳೂ ಸೇರಿದಂತೆ ವಿವಿಧ ಭಾಷೆಯ ಒಟ್ಟು 29 ರಂಗತಂಡಗಳಿಂದ ನಾಟಕಗಳು ಪ್ರದರ್ಶನಗೊಂಡವು. ನೀನಾಸಂ ಮತ್ತು ರಾಷ್ಟ್ರೀಯ ರಂಗ ಶಾಲೆಗಳಿಂದ ಪ್ರದರ್ಶಿತವಾದ ನಾಟಕಗಳನ್ನು ನೋಡಲು ಮೂರು ದಿನ ಮುಂಚೆಯೇ ಟಿಕೇಟುಗಳನ್ನು ಕಾದಿರಿಸಿ, ಜನರು ವೀಕ್ಷಿಸುತ್ತಿದ್ದರು.
ಬೀದಿ ನಾಟಕಗಳು, ಬೇರೆ ಭಾಷೆಯ, ಶೈಲಿಯ ನಾಟಕಗಳು ಮೈಸೂರಿನ ವಿವಿಧ ಬಡಾವಣೆಗಳಲ್ಲಿಯೂ ಪ್ರದರ್ಶಿತಗೊಂಡವು. ವಿಚಾರ ಸಂಕಿರಣಗಳು, ಚರ್ಚೆ, ಹಿರಿಯ ಕಲಾವಿದರಿಗೆ ಸನ್ಮಾನ, ಪುಸ್ತಕ ಪ್ರದರ್ಶನ, ಖಾದಿ ಬಟ್ಟೆ ಮಾರಾಟ, ಛಾಯಾಚಿತ್ರ ಪ್ರದರ್ಶನಗಳನ್ನು ನಾಟಕೋತ್ಸವದ ಅಂಗವಾಗಿ ಏರ್ಪಡಿಸಲಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...