ತುಮಕೂರಿನ ರಂಗದಲ್ಲಿ ಕಾರ್ನಾಡ್,ಲಂಕೇಶ್ ಕಂಬಾರರ ನಾಟಕಗಳು
ತುಮಕೂರು : ನವೆಂಬರ್ 27ರಿಂದ ಡಿಸೆಂಬರ್ 2ರವರೆಗೆ ನಗರದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ ಹಾಗೂ ಲಂಕೇಶ್ ಅವರ ಆಯ್ದ ನಾಟಕಗಳ ಪ್ರದರ್ಶಿಸಲಾಗುವುದು ಎಂದು ನಾಟಕ ಅಕಾಡೆಮಿಯ ಅಧ್ಯಕ್ಷ ಆರ್. ನಾಗೇಶ್ ತಿಳಿಸಿದ್ದಾರೆ.
ನ. 27ರ ಮಂಗಳವಾರ ಸಂಜೆ ರಾಜ್ಯ ಕೃಷಿ ಸಚಿವ ಟಿ. ಬಿ. ಜಯಚಂದ್ರ ನಾಟಕೋತ್ಸವನ್ನು ಉದ್ಘಾಟಿಸುವರು. ಅಂದು ಸಂಜೆ 6.30ಕ್ಕೆ ಬೆಂಗಳೂರಿನ ಅಭಿನಯ ತರಂಗ ತಂಡದವರಿಂದ ಕಾರ್ನಾಡ್ ಅವರ ‘ಅಗ್ನಿ ಮತ್ತು ಮಳೆ’ ನಾಟಕ ಪ್ರದರ್ಶಿತವಾಗಲಿದೆ. ನಂತರ ವಿವಿಧ ತಂಡದವರಿಂದ ಪ್ರತಿದಿನ ಕ್ರಮವಾಗಿ, ಕರ್ನಾಡರ ‘ತಲೆದಂಡ’, ಕಂಬಾರರ ‘ಮಹಾಮಾಯಿ’ , ‘ಜೈಸಿದ ನಾಯಕ’, ಲಂಕೇಶರ ‘ಗುಣಮುಖ’, ‘ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ರಾಜ್ಯದ ಇತರ ಆರು ಜಿಲ್ಲೆಗಳಲ್ಲಿಯೂ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಡಿಸೆಂಬರ್ 10ರಿಂದ ಮಂಗಳೂರಿನಲ್ಲಿ ಕೋಮು ಸೌಹಾರ್ದತೆಗೆ ಸಂಬಂಧಿಸಿದ ನಾಟಕೋತ್ಸವ, ಜನವರಿ 17ರಿಂದ ಬೆಳಗಾಂನಲ್ಲಿ ಯುವನಿರ್ದೇಶಕರ ನಾಟಕೋತ್ಸವ, ಫೆಬ್ರವರಿಯಲ್ಲಿ ಬಳ್ಳಾರಿಯಲ್ಲಿ ಮಹಿಳಾ ನಿರ್ದೇಶಕರು ನಿರ್ದೇಶಿಸಿದ ನಾಟಕೋತ್ಸವ ಮತ್ತು ಮೈಸೂರಿನಲ್ಲಿ ಐತಿಹಾಸಿಕ ವಸ್ತುವನ್ನಾಧರಿಸಿದ ನಾಟಕ ಪ್ರದರ್ಶನ, ಬಾಗಲಕೋಟೆ ಅಥವಾ ಧಾರವಾಡದಲ್ಲಿ ಏಕಾಂಕ ನಾಟಕ ಪ್ರದರ್ಶನಗಳನ್ನು ಅಕಾಡೆಮಿ ಹಮ್ಮಿಕೊಂಡಿದೆ.
ಡಿಸೆಂಬರ್ 1ರಂದು ಮುಂಬಯಿಯಲ್ಲಿ ಮೈಸೂರು ಅಸೋಸಿಯೇಷನ್ ನೆರವಿನೊಂದಿಗೆ, ಕನ್ನಡ, ಹಿಂದಿ ಮತ್ತು ಮರಾಠಿಯ ತ್ರಭಾಷಾ ನಾಟಕೋತ್ಸವಗಳು ನಡೆಯಲಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...