ನಿಮ್ಮ ಮಕ್ಕಳು ಓದುವ ಚರಿತ್ರೆ ಪಠ್ಯದಲ್ಲಿ ತಪ್ಪು ಅಂಕಿ ಅಂಶ!
ನವದೆಹಲಿ : ನಾಲ್ಕು ತರಗತಿಗಳ ಚರಿತ್ರೆ ಪಾಠ ಪುಸ್ತಕಗಳಲ್ಲಿ ತಪ್ಪು ಅಂಕಿ ಅಂಶಗಳು ಮುದ್ರಿತವಾಗಿರುವುದನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಸರಕಾರ ಒಪ್ಪಿಕೊಂಡಿದೆ.
ಎನ್ಸಿಇಆರ್ಟಿ(ಶೈಕ್ಷಣಿಕ ಅಧ್ಯಯನ ಮತ್ತು ತರಬೇತಿಗೆ ಸಂಬಂಧಿಸಿದ ರಾಷ್ಟ್ರೀಯ ಸಮಿತಿ) ರಚಿಸಿರುವ ಪಾಠಪುಸ್ತಕಗಳಲ್ಲಿ ಅಂಕಿಅಂಶ, ಪಕ್ಷಪಾತ ಮತ್ತು ಉತ್ಪ್ರೇಕ್ಷೆಯಂತಹ ತಪ್ಪುಗಳು ಇವೆ. ಈ ತಪ್ಪುಗಳನ್ನು ಸರಿಪಡಿಸಲು ಸರಿಯಾದ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಸದನದಲ್ಲಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವೆ ರೀಟಾ ವರ್ಮಾ ಈ ವಿಷಯವನ್ನು ತಿಳಿಸಿದರು. ಚರಿತ್ರೆಕಾರ ರೊಮಿಲಾ ಟೋಪಾರ್ (6ನೇ ತರಗತಿ), ರಾಮ್ ಶರಣ್ ಶರ್ಮಾ (11ನೇ ತರಗತಿ) ಅವರ ಪ್ರಾಚೀನ ಭಾರತ ಪುಸ್ತಕವನ್ನು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಇವುಗಳಲ್ಲಿ ಆಕ್ಷೇಪಣಾರ್ಹ ವಿಷಯಗಳು ಕಂಡು ಬಂದಿರುವುದಾಗಿ ಹೇಳಿದರು.
11 ನೇ ತರಗತಿಗೆ ಸೂಚಿಸಲಾಗಿರುವ ಅರ್ಜುನ್ ಮತ್ತು ಇಂದಿರಾ ದೇವ್ ಅವರ ಇನ್ನೆರಡು ಪಠ್ಯ ಪುಸ್ತಕ ಹಾಗೂ ಸತೀಶ್ಚಂದ್ರ ಅವರ ಮಧ್ಯಕಾಲೀನ ಭಾರತ ಎಂಬ ಪುಸ್ತಕಗಳಲ್ಲಿ ಕಂಡು ಬಂದಿರುವ ತಪ್ಪುಗಳನ್ನು ವಿರೋಧಿಸಿ ಹಲವು ಕಡೆ ಪ್ರತಿಭಟನೆಗಳೂ ನಡೆದಿರುವುದಾಗಿ ವರ್ಮಾ ತಿಳಿಸಿದರು.
ಪಠ್ಯ ಪುಸ್ತಕಗಳ ಮುದ್ರಣವನ್ನು ಎನ್ಸಿಇಆರ್ಟಿ ಮತ್ತೆ ಹೊಸದಾಗಿ ಆರಂಭಿಸಿದ್ದು, ತಪ್ಪುಗಳು ಪುನರಾವರ್ತನೆಯಾಗದಂತೆ ಕಾಳಜಿ ತೆಗೆದುಕೊಳ್ಳಲಾಗುವುದು ಎಂದು ವರ್ಮಾ ಭರವಸೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...