ಬೆಂಗಳೂರಿಗರಿಗೆ 100% ಸುರಕ್ಷೆ : ಸಾಂಗ್ಲಿಯಾನ ಭರವಸೆ
ಬೆಂಗಳೂರು : ಬೆಂಗಳೂರು ನಗರದ ನಾಗರಿಕರಿಗೆ ನೂರಕ್ಕೆ ನೂರರಷ್ಟು ರಕ್ಷಣೆ ನೀಡಲು ಪೊಲೀಸರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರು ನಗರವಾಸಿಗಳಿಗೆ 100% ಸುರಕ್ಷೆ ನೀಡುವುದು ನಮ್ಮ ಗುರಿ ಎಂದು ಪೊಲೀಸ್ ಆಯುಕ್ತ ಎಚ್.ಟಿ. ಸಾಂಗ್ಲಿಯಾನಾ ತಿಳಿಸಿದ್ದಾರೆ.
ಬೆಂಗಳೂರು ವರದಿಗಾರರ ಕೂಟ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ನಗರದ ವೃತ್ತಿಪರ ಕಾಲೇಜುಗಳಲ್ಲಿ ವ್ಯಾಸಂಗಕ್ಕೆಂದು ನೆರೆರಾಜ್ಯದಿಂದ ಬಂದಿರುವ ಕೆಲವು ವಿದ್ಯಾರ್ಥಿಗಳೂ ಸಣ್ಣಪುಟ್ಟ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಮೋಜಿನ ಜೀವನ ನಡೆಸಲು ಹಣ ಸಂಪಾದಿಸುವ ಸಲುವಾಗಿ ನೆರೆ ರಾಜ್ಯದ ವಿದ್ಯಾರ್ಥಿಗಳು ಸಣ್ಣಪುಟ್ಟ ಅಪರಾಧಗಳನ್ನು ಎಸಗುತ್ತಿದ್ದಾರೆ. ಇದನ್ನು ನಿಗ್ರಹಿಸಲು ನಗರದ ಸರ್ಕಾರಿ ಮತ್ತು ಖಾಸಗಿ ಉನ್ನತ ಮತ್ತು ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ನೆರೆರಾಜ್ಯದ ವಿದ್ಯಾರ್ಥಿಗಳ ವಿವರವಾದ ಪಟ್ಟಿ ಸಲ್ಲಿಸುವಂತೆ ಕಾಲೇಜು ಆಡಳಿತಕ್ಕೆ ಕೋರಲಾಗುವುದು ಎಂದರು.
ನೆರೆರಾಜ್ಯದ ವಿದ್ಯಾರ್ಥಿಗಳ ಕೌಟುಂಬಿಕ ವಿವರ ಹಾಗೂ ಅವರ ಜೀನವ ಶೈಲಿಯನ್ನು ಪರಿಶೀಲಿಸಿ, ಅನುಮಾನ ಬಂದ ವಿದ್ಯಾರ್ಥಿಗಳ ಬಗ್ಗೆ ನಿಗಾ ಇಡಲಾಗುವುದು ಎಂದರು. ಈ ಸಂಬಂಧ ಎಲ್ಲ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳುವುದಾಗಿಯೂ ಅವರು ಹೇಳಿದರು.
ಜನರ ಸಹಕಾರಕ್ಕೆ ಮನವಿ: ಯಾವುದೇ ಕಳವು, ಕೊಲೆ ಅಥವಾ ಮತ್ತಾವುದೇ ಅಪರಾಧ ಪ್ರಕರಣದ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಕ್ಕರೆ, ಅದನ್ನು ಕೂಡಲೇ ನಾಗರಿಕರು ಪೊಲೀಸರ ಗಮನಕ್ಕೆ ತರಬೇಕು. ಆಗ ಮಾತ್ರ ಅಪರಾಧ ನಿಗ್ರಹ ಸಾಧ್ಯ. ಈನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸರಕರಿಸಬೇಕು ಎಂದು ಸಾಂಗ್ಲಿಯಾನ ಹೇಳಿದರು.
ಪ್ರಚಾರ ಪ್ರಿಯನಲ್ಲ: ನಾನೇನು ಪ್ರಚಾರಪ್ರಿಯನಲ್ಲ. ಪರ್ತಕರ್ತರು ಕೇಳುವ ಪ್ರಶ್ನೆಗಳಿಗೆ ನಾನು ಉತ್ತರ ಕೊಡುತ್ತೇನೆ. ಇದು ನನ್ನ ಕರ್ತವ್ಯ. ಮಾಹಿತಿ ಪಡೆಯಲಿಚ್ಛಿಸುವ ಪತ್ರಕರ್ತರಿಗೆ ನನ್ನ ಕಚೇರಿ ಹಾಗೂ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನ ವಾಚ್