ಜಾತಿಗೊಬ್ಬ ಜಗದ್ಗುರು ಇರುವ ಕುರಿತು ನಿಡುಮಾಮಿಡಿ ಕಿಡಿ
ಬೆಂಗಳೂರು : ಇತ್ತೀಚೆಗೆ ಜಗದ್ಗುರುಗಳ ಸಂಖ್ಯೆ ಹೆಚ್ಚುತ್ತಿದೆ. ಜಗದ್ಗುರು ಎಂದು ಹೇಳಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಾತಿಗೊಬ್ಬ ಜಗದ್ಗುರು ಇದ್ದಾರೆ,- ಈ ರೀತಿ ಜಗದ್ಗುರುಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದವರು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ.
ನಿಜವಾದ ಜಗದ್ಗುರುಗಳೆಂದರೆ ಮಹಾತ್ಮಗಾಂಧಿ, ವಿವೇಕಾನಂದ, ಅಂಬೇಡ್ಕರ್ ಅಂಥವರು ಮಾತ್ರ. ಜಾತಿಗೊಬ್ಬ ಜಗದ್ಗುರು ಇರಲೇಬಾರದು ಎಂದು ಸ್ವಾಮೀಜಿ ಹೇಳಿದರು. ಬೆಂಗಳೂರು ವಕೀಲರ ಸಂಘದ ಸಭಾಂಗಣದಲ್ಲಿ ಗುರುವಾರ, ಮತಾಂಧತೆ ಮತ್ತು ಮಾನವೀಯತೆ ಎನ್ನುವ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
ಧರ್ಮಯುದ್ಧ ಅನೈತಿಕ, ಅಮಾನವೀಯ
ಧರ್ಮಯುದ್ಧ ಅನೈತಿಕ, ಅಮಾನವೀಯ ಎಂದು ಬಣ್ಣಿಸಿದ ಚನ್ನಮಲ್ಲ ಸ್ವಾಮೀಜಿ- ಮನುಷ್ಯರ ನಡುವೆ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಧರ್ಮವನ್ನು ಬೆಳೆಸಬೇಕು ಎಂದರು. ಒಂದು ಧರ್ಮಕ್ಕೆ ಪವಿತ್ರವಾದುದು ಇನ್ನೊಂದು ಧರ್ಮಕ್ಕೆ ಅಸಹನೀಯವಾಗುತ್ತದೆ. ಹಿಂದೂಗಳು ಪವಿತ್ರವೆಂದು ಪೂಜಿಸುವ ಹಸು, ಮುಸಲ್ಮಾನರಿಗೆ ರುಚಿಕರ ಭಕ್ಷ್ಯ. ಆದರೆ, ಪವಿತ್ರ ಅಪವಿತ್ರ ಇದೆಲ್ಲವನ್ನೂ ಮೀರಿ ಮಾನವೀಯ ಮೌಲ್ಯಗಳನ್ನು ಧರ್ಮ ಕಲಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಬಾಬ್ರಿ ಮಸೀದಿ ನೆಲಸಮ ಮಾಡಿದ್ದು ದೌರ್ಜನ್ಯ. ಇದಕ್ಕೆ ವಿರುದ್ಧವಾಗಿ ಪಾಕಿಸ್ತಾನದಲ್ಲಿ ದೇವಸ್ಥಾನಗಳನ್ನು ಕೆಡವಿದ್ದೂ ದೌರ್ಜನ್ಯ. ಅಪಘನಿಸ್ತಾನದಲ್ಲಿ ಬುದ್ಧನ ವಿದಗ್ರಹ ನೆಲಸಮ ಮಾಡಿದ್ದೂ ದೌರ್ಜನ್ಯ. ಧರ್ಮ- ಧರ್ಮಗಳ ಸಂಘರ್ಷ ರಕ್ತಪಾತಕ್ಕೆ ಕಾರಣವಾಗುತ್ತದೆ. ಧರ್ಮ ಅಧರ್ಮದ ವಿರುದ್ಧ ಯುದ್ಧ ಸಾರಬೇಕು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...