ವೀರಪ್ಪನ್ಗೆ ಸೆಲ್-ಕೆಸೆಟ್ ಪೂರೈಸುತ್ತಿದ್ದ ಶಿವಸುಬ್ರಮಣ್ಯಂ ಬಂಧನ
ರಾಮಾಪುರ : ವೀರಪ್ಪನ್ಗೆ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸರಬರಾಜು ಮಾಡುತ್ತಿದ್ದ ನಕ್ಕೀರನ್ ಪತ್ರಿಕೆ ವರದಿಗಾರ ಶಿವಸುಬ್ರಮಣ್ಯಂನನ್ನು ಕರ್ನಾಟಕ ವಿಶೇಷ ಕಾರ್ಯಾಚರಣೆ ಪೊಲೀಸರು ಮಂಗಳವಾರ ರಾತ್ರಿ ಯಡಿಯಾರ ಹಳ್ಳದ ಬಳಿ ಮಾಲು ಸಮೇತ ಹಿಡಿದಿದ್ದಾರೆ.
ಕೆಸೆಟ್, ಬ್ಯಾಟರಿ, ಸೆಲ್ಗಳು, ಕೆಮೆರಾ ಮತ್ತಿತರ ವಸ್ತುಗಳನ್ನು ಶಿವಸುಬ್ರಮಣ್ಯಂನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಳ್ಳೆಗಾಲ ತಾಲ್ಲೂಕಿನ ರಾಮಾಪುರ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ, ಈತ ಸಿಕ್ಕಿ ಬಿದ್ದಿದ್ದಾನೆ. ತಾವು ವಶಪಡಿಸಿಕೊಂಡಿರುವ ವಸ್ತುಗಳನ್ನು ವೀರಪ್ಪನ್ಗೆ ತಲುಪಿಸಲು ಒಯ್ಯುತ್ತಿದ್ದ ಎಂದು ಎಸ್ಟಿಎಫ್ ಪೊಲೀಸರು ತಿಳಿಸಿದ್ದಾರೆ.
ನರಹಂತಕ ವೀರಪ್ಪನ್ನನ್ನು ಮೊದಲ ಬಾರಿಗೆ ಸಂದರ್ಶನ ಮಾಡಿದ ಅಗ್ಗಳಿಕೆಗೆ ಪಾತ್ರವಾಗಿರುವ ಶಿವಸುಬ್ರಮಣ್ಯಂ, ನಕ್ಕೀರನ್ ಪತ್ರಿಕೆ ಸಂಪಾದಕ ಗೋಪಾಲ್ ಹಾಗೂ ವೀರಪ್ಪನ್ ನಡುವೆ ಸಂಪರ್ಕ ಕಲ್ಪಿಸಲೂ ಕಾರಣನಾಗಿದ್ದ. ನಕ್ಕೀರನ್ ಪತ್ರಿಕೆಗಾಗಿ ಪದೇಪದೇ ವೀರಪ್ಪನ್ ಸಂದರ್ಶನ ನಡೆಸಿರುವ ಈತ ಅಪಹರಣ ಪ್ರಕರಣಗಳಲ್ಲಿ ಸಂಧಾನಕಾರನಾಗಿಯೂ ಗೋಪಾಲ್ ಜೊತೆ ತೆರಳಿದ್ದಾರೆ.
ಕೊಯಮತ್ತೂರು ವರದಿ : ವೀರಪ್ಪನ್ ಸಹವರ್ತಿಗಳೆಂದು ಹೇಳಲಾದ ವೆಂಕಟ್ರಾಮನ್, ಸೆಲ್ವ ಮತ್ತು ಕುಪ್ಪುಸ್ವಾಮಿ ಎಂಬುವರನ್ನು ತಮಿಳುನಾಡು ಎಸ್ಟಿಎಫ್ ಪೊಲೀಸರು ಬಂಧಿಸಿದ್ದಾರೆ. ಆಹಾರ ಪದಾರ್ಥ ಕೊಳ್ಳಲು ಹೋಗುತ್ತಿದ್ದಾಗ ಇವರನ್ನು ಸಿರಿಮುಗಾೖ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಬಂಧಿತರಿಂದ ಮೂರು ದೇಶೀ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ