ನವೋದಯ ಶಾಲೆಗಳಲ್ಲಿ ಯೋಗ: ಮುರಳೀ ಮನೋಹರ ಜೋಶಿ
ಬೆಂಗಳೂರು : ಮಕ್ಕಳಿಗೆ ಶಿಕ್ಷಣ ಮಟ್ಟದಲ್ಲಿಯೇ ಭಾರತೀಯ ಸಂಸ್ಕೃತಿಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ನವೋದಯ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಅಳವಡಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ.
ಮಾನವ ಸಂಪನ್ಮೂಲ ಸಚಿವ ಮುರಳೀ ಮನೋಹರ್ ಜೋಶಿ ಬುಧವಾರ ಯೋಗದ ಅಧ್ಯಯನ ಮತ್ತು ಅಳವಡಿಕೆಯ ಮಿತಿಗಳ ಬಗೆಗಿನ 12ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ವಿಷಯ ತಿಳಿಸಿದರು. ಆಂಧ್ರಪ್ರದೇಶದ ಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯ ಮಾಡಿದ ಅಲ್ಲಿನ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪ್ರಯತ್ನವನ್ನು ಶ್ಲಾಘಿಸಿದ ಅವರು, ಶಿಕ್ಷಣವು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಷಯ. ಇತರ ರಾಜ್ಯಗಳೂ ಉತ್ತಮ ವಿಷಯಗಳನ್ನು ಶಿಕ್ಷಣದಲ್ಲಿ ಅಳವಡಿಸಬೇಕು ಎಂದರು.
ಶಿಕ್ಷಣದ ಕೇಸರೀಕರಣ ಪ್ರಯತ್ನದ ಆರೋಪವನ್ನು ತಳ್ಳಿ ಹಾಕಿದ ಸಚಿವರು, ಉತ್ತಮ ಪ್ರಯತ್ನಗಳನ್ನು ಟೀಕಿಸುವವರು ಕೇಸರಿಕರಣವಾಗಲೀ, ಶಿಕ್ಷಣವಾಗಲೀ ವಾಸ್ತವದಲ್ಲಿ ಏನೆಂಬುದನ್ನು ಅರ್ಥೈಸಿಕೊಂಡಿಲ್ಲ . ಯೋಗ ಮತ್ತು ಹಿಂದೂ ತತ್ವಶಾಸ್ತ್ರ ಬ್ರಹ್ಮಾಂಡದಲ್ಲಿ ಆತ್ಮನನ್ನು ಲೀನವಾಗಿಸುತ್ತದೆ. ಪ್ರಜ್ಞೆ ಮತ್ತು ಧ್ಯಾನದ ಕಡೆಗೆ ಹೆಚ್ಚಿನ ಒತ್ತು ಕೊಡುವ ಯೋಗಶಿಕ್ಷಣ ವಿದ್ಯಾರ್ಥಿಗಳಿಗೆ ಸಹಕಾರಿಯಾಗಬಲ್ಲುದು ಎಂದು ಅಭಿಪ್ರಾಯ ಪಟ್ಟರು. ಬುದ್ಧಿ ಮತ್ತು ವಿಷಯಗಳ ನಡುವೆ ವ್ಯತ್ಯಾಸವನ್ನು ಬೋಧಿಸುವ ಪಾಶ್ಚಾತ್ಯ ಶಿಕ್ಷಣ ಸಂಸ್ಕೃತಿಯನ್ನು ಜೋಶಿ ಟೀಕಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...