ದ್ರಾವಿಡ ಭಾಷೆಗಳ ನಿಘಂಟಿನ ಬಗ್ಗೆ ರಾಷ್ಟ್ರೀಯ ವಿಚಾರಗೋಷ್ಠಿ
ಉಡುಪಿ : ದ್ರಾವಿಡ ಭಾಷೆಗಳ ನಿಘಂಟು ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ ಉಡುಪಿಯಲ್ಲಿ ಶುಕ್ರವಾರದಿಂದ ನಡೆಯಲಿದೆ. ಈ ಕಾರ್ಯಕ್ರಮವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಜಂಟಿಯಾಗಿ ಆಯೋಜಿಸಿವೆ.
ಈ ಸಂದರ್ಭದಲ್ಲಿ ದ್ರಾವಿಡ ನಿಘಂಟಿನ ಬಿಡುಗಡೆಯೂ ನಡೆಯಲಿದೆ. ಈ ವಿಷಯವನ್ನು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಇಲ್ಲಿ ತಿಳಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ 34ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ಯಶಸ್ವಿಯಾಗಿ ನಡೆಸಿದೆ ಎಂಬುದನ್ನು ಅವರು ಸ್ಮರಿಸಿದರು.
ಎರಡು ದಿನಗಳ ಕಾಲ ನಡೆಯುವ ವಿಚಾರ ಸಂಕಿರಣದ ಮೊದಲ ದಿನ ಅಣ್ಣಾಮಲೈ ವಿಶ್ವವಿದ್ಯಾಲಯದ ಪ್ರೊ. ರಾಮಕೃಷ್ಣ ಶೆಟ್ಟಿ, ಕನ್ನೂರ್ ವಿಶ್ವವಿದ್ಯಾಲಯದ ಪ್ರೊ. ಪಿ. ಶ್ರೀಕೃಷ್ಣ ಭಟ್ ಅವರು ತಮಿಳು ಮತ್ತು ಮಲಯಾಳಂ ನಿಘಂಟುಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಅವರು ಹೇಳಿದರು.
ಎರಡನೆ ದಿನದ ಗೋಷ್ಠಿಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ಮಾಧವ ಪೆರಾಜ್ ಅವರು ಕನ್ನಡ ನಿಘಂಟಿನ ಬಗ್ಗೆ ಪ್ರಬಂಧ ಮಂಡಿಸಿದರೆ, ಕೃಷ್ಣದೇವರಾಯ ವಿ.ವಿಯ ಪ್ರೊ. ರಾ. ಶೇಷಶಾಸ್ತ್ರಿ ಮತ್ತು ಕನ್ನಡ ವಿವಿಯ ಪ್ರೊ. ಎ.ವಿ. ನಾವಡಾ ಅವರು ಅನುಕ್ರಮವಾಗಿ ತೆಲುಗು ಮತ್ತು ತುಳು ನಿಘಂಟುಗಳ ಬಗ್ಗೆ ತಮ್ಮ ವಿಚಾರಧಾರೆ ಮಂಡಿಸಲಿದ್ದಾರೆ ಎಂದೂ ವೆಂಕಟೇಶ್ ವಿವರಿಸಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...