ಗಾಂಧಿ ರಸ್ತೆಯಲ್ಲಿ ಮರಕ್ಕೆ ಕೊಡಲಿ ; ದಿನಕರ್ ಕೋರ್ಟಿಗೆ
ಬೆಂಗಳೂರು: ಮಹಾತ್ಮಗಾಂಧಿ ರಸ್ತೆಯನ್ನು ಅಗಲಗೊಳಿಸುವ ಉದ್ದೇಶದಿಂದ, ರಸ್ತೆ ಪಕ್ಕದ ಮರಗಳನ್ನು ಕಡಿಯಲು ಆದೇಶ ಹೊರಡಿಸಿರುವ ನಗರ ಪೊಲೀಸ್ ಆಯುಕ್ತ ಎಚ್.ಟಿ.ಸಾಂಗ್ಲಿಯಾನ ಅವರ ಕ್ರಮವನ್ನು ಪ್ರಶ್ನಿಸಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ನಿವೃತ್ತಿಯ ನಂತರ ವಕೀಲಿ ವೃತ್ತಿಯನ್ನು ಅವಲಂಬಿಸಿರುವ ದಿನಕರ್, ಮರ ಕಡಿದು ಮಹಾತ್ಮ ಗಾಂಧಿ ರಸ್ತೆಯನ್ನು ಅಗಲಗೊಳಿಸುವ ಕ್ರಮವನ್ನು ಕೈ ಬಿಡುವಂತೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಮರಗಳನ್ನು ಕಡಿಯುವುದು 1976 ನೇ ಕರ್ನಾಟಕ ಮರ ಸಂರಕ್ಷಣಾ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಎಂದೂ ದಿನಕರ್ ವಾದಿಸಿದ್ದಾರೆ.
ಪ್ರತಿ ತಿಂಗಳ ಮೊದಲ ಭಾನುವಾರ ಗಾಂಧಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ಮಕ್ಕಳಿಗೆ ಆಡವಾಡಲು ಅವಕಾಶ ಮಾಡಿಕೊಡುವ ಸಾಂಗ್ಲಿಯಾನ ಅವರ ಉದ್ದೇಶದ ಕ್ರಮಬದ್ಧತೆಯನ್ನೂ ಪ್ರಶ್ನಿಸಿರುವ ದಿನಕರ್, ಈ ರೀತಿಯ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸ್ ಆಯುಕ್ತರಿಗೆ ಇಲ್ಲ ಎಂದು ತಿಳಿಸಿದ್ದಾರೆ. ದಿನಕರ್ ಅವರ ಅರ್ಜಿಯನ್ನು ಹೈಕೋರ್ಟ್ ಇನ್ನೂ ವಿಚಾರಣೆಗೆ ಅಂಗೀಕರಿಸಬೇಕಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನ ವಾಚ್