ಕೇಳಿದೊಡನೆಯೇ ಕರ್ನಾಟಕದ 335 ಪಟ್ಟಣಗಳಲ್ಲಿ ದೂರವಾಣಿ
ಬೆಂಗಳೂರು : ರಾಜ್ಯದ 335 ಪಟ್ಟಣ ಪ್ರದೇಶಗಳಲ್ಲಿ ಕೇಳಿದ ಕೂಡಲೇ ಗ್ರಾಹಕರಿಗೆ ದೂರವಾಣಿ ಸಂಪರ್ಕ ಒದಗಿಸಲು ಇಲಾಖೆ ಸಜ್ಜಾಗಿದೆ. ಈ ವಿಷಯವನ್ನು ಕರ್ನಾಟಕ ಟೆಲಿಕಾಂ ವೃತ್ತದ ಪ್ರಧಾನ ಪ್ರಬಂಧಕ ಕೆ. ಪದ್ಮನಾಭನ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಡಾಟಾ ಪೋಸ್ಟ್ ಲಕ್ಕಿ ಕೂಪನ್ ಡ್ರಾ ವಿಜೇತರಿಗೆ ಬಹುಮಾನ ವಿತರಿಸುವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಈಗಾಗಲೇ ಒಂದು ದೂರವಾಣಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಕೇವಲ ಒಂದೇ ಒಂದು ರುಪಾಯಿ ಠೇವಣಿಗೆ ಮತ್ತೊಂದು ಟೆಲಿಫೋನ್ ಒದಗಿಸುವ ಪ್ರಯೋಗ ಯಶಸ್ವಿಯಾಗಿದೆ ಎಂದರು.
ಈಗ ಬೆಂಗಳೂರು ಮಹಾನಗರದ ಬಹುತೇಕರ ಮನೆಯಲ್ಲಿ ಕಂಪ್ಯೂಟರ್ ಇದೆ. ಅದಕ್ಕೆ ಇಂಟರ್ನೆಟ್ ಸೌಲಭ್ಯವೂ ಇದೆ. ಬಹುತೇಕ ಮಂದಿ ಟೆಲಿಫೋನ್ ನೆರವಿನ ಡಯಲಪ್ ಸೌಲಭ್ಯ ಹೊಂದಿರುವ ಕಾರಣ ಅವರಿಗೆ ಹೆಚ್ಚುವರಿ ಟೆಲಿಫೋನ್ ಅಗತ್ಯ ಇದೆ. ಇದನ್ನು ಮನಗಂಡು ಇಲಾಖೆ ರೂಪಿಸಿದ 1 ರುಪಾಯಿ ಟೆಲಿಫೋನ್ ಯೋಜನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.
ಆಧುನಿಕ ಅಂಚೆ ಇಲಾಖೆ: ಅಂಚೆ ಇಲಾಖೆ ಇಂದಿನ ಅಗತ್ಯಕ್ಕನುಗುಣವಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಗ್ರಾಹಕರು ತಮ್ಮಲ್ಲಿರುವ ವಸ್ತುಗಳನ್ನು ಮಾರಲು ನೆರವಾಗುವ ದೃಷ್ಟಿಯಿಂದ ಡೇಟಾ ಪೋಸ್ಟ್ ಮಾಹಿತಿ ಕೇಂದ್ರ ತೆರೆಲಾಗಿದೆ ಎಂದು ಕರ್ನಾಟಕ ಪ್ರಧಾನ ಅಂಚೆ ಮಹಾ ನಿರ್ದೇಶಕ ಕೆ.ಬಿ.ಎಚ್. ನಾಯರ್ ತಿಳಿಸಿದರು. ಇದರ ಉಪಯೋಗವನ್ನು ಸಾರ್ವಜನಿಕರು ಪಡೆಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡೇಟಾ ಪೋಸ್ಟ್ ಯೋಜನಾಧಿಕಾರಿ ಎಸ್.ಕೆ. ಚೌದರಿ, ಅಂಚೆ ಸೇವೆಗಳ ನಿರ್ದೇಶಕ ಟಿ. ಮೂರ್ತಿ, ಮೀರಾ ದತ್ತ ಮೊದಲಾದವರು ಪಾಲ್ಗೊಂಡಿದ್ದರು. ಅಂಚೆ ಗ್ರಾಹಕರಾದ ಎನ್. ರಮೇಶ್, ಪಿ.ಎನ್. ನರಸಿಂಹಮೂರ್ತಿ ಮತ್ತು ಬಿ.ಎಸ್. ಶ್ಯಾಮಸುಂದರ್ ಡಾಟಾ ಪೋಸ್ಟ್ ಲಕ್ಕಿ ಕೂಪನ್ನ ನಗದು ಬಹುಮಾನ ಸ್ವೀಕರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...