ಪ್ರೇಮಾ ಕೃಷ್ಣಗೆ ಸುಮಂಗಲಿ ಸೇವಾಶ್ರಮದ ಗೀತಾಂಜಲಿ ಪ್ರಶಸ್ತಿ
ಬೆಂಗಳೂರು : ಸುಮಂಗಲಿ ಸೇವಾಶ್ರಮದ 26 ನೇ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ನಗರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಹಾಗೂ ವಿಧಾನ ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪನವರ ಪತ್ನಿ ಸುಭದ್ರಾ ವೆಂಕಟಪ್ಪನವರಿಗೆ ಗೀತಾಂಜಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಪ್ರೇಮಾ ಕೃಷ್ಣ ಅವರು, ನೂರಾರು ಮಹಿಳೆಯರು ಹಾಗೂ ಮಕ್ಕಳಿಗೆ ಆಶ್ರಯ ನೀಡಿರುವ ಸುಮಂಗಲಿ ಸೇವಾಶ್ರಮದ ಸಾಧನೆಯನ್ನು ಶ್ಲಾಘಿಸಿದರು. ಸಮಾಜದಲ್ಲಿ ನೊಂದವರ ಸೇವೆಯನ್ನು ಕೈಗೊಳ್ಳುವ ಮೂಲಕ ಸಾಮಾಜಿಕ ಅಸಮಾನತೆ ನಿವಾರಣೆ ಪ್ರಯತ್ನಗಳನ್ನು ಶ್ರೀಮಂತರು ಕೈಗೊಳ್ಳಬೇಕೆಂದು ಪ್ರೇಮಾ ಕೃಷ್ಣ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ರಮಾಭಿಮಾನೆ ಮತ್ತು ಸರೋಜಮ್ಮ ಅವರಿಗೆ ಸುಮಂಗಲಿ ಸೇವಾ ಪ್ರಶಸ್ತಿಯನ್ನು ಹಾಗೂ ಬಿ.ಟಿ. ಮುನಿಯಪ್ಪ ಅವರಿಗೆ ಸುಮಂಗಲಿ ಡೋನರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಕ್ರಿಯಾಯೋಜನೆ ಅಧ್ಯಕ್ಷೆ ಗುರಮ್ಮ ಸಿದ್ಧಾರೆಡ್ಡಿ , ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಹೆಚ್.ಆರ್.ದಾಸೇಗೌಡ, ಕೃಷ್ಣಾರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ