ಮಂದಿರ ನಿರ್ಮಾಣಕ್ಕೆ ರಾಮಜನ್ಮ ಭೂಮಿ ಹಸ್ತಾಂತರಿಸಿ-ವಿಹೆಚ್ಪಿ
ಬೆಂಗಳೂರು : ರಾಮಮಂದಿರ ನಿರ್ಮಾಣ ವಿವಾದ ಬರುವ ಮಾರ್ಚ್12ರೊಳಗೆ ಇತ್ಯರ್ಥವಾಗುವ ಬಗ್ಗೆ ವಿಶ್ವ ಹಿಂದೂ ಪರಿಷತ್ ತನ್ನ ಸಂಶಯ ವ್ಯಕ್ತಪಡಿಸಿದ್ದು, ಕೇಂದ್ರ ಸರಕಾರವು ಈ ಗಡುವಿನೊಳಗೆ ವಿವಾದಿತ ರಾಮಜನ್ಮ ಭೂಮಿಯನ್ನು ಮಂದಿರ ನಿರ್ಮಾಣಕ್ಕಾಗಿ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದೆ.
ಕೇಂದ್ರ ಸರಕಾರದಿಂದ ನಮಗೆ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಅಲ್ಲದೆ ಮಾರ್ಚ್ 12ರ ಗಡುವಿನೊಳಗೆ ಸರಕಾರ ವಿವಾದ ಇತ್ಯರ್ಥ ಮಾಡುತ್ತದೆ ಎಂಬ ಬಗ್ಗೆ ನಮಗೆ ಯಾವುದೇ ಭರವಸೆಯೂ ಇಲ್ಲ ಎಂದು ವಿಹೆಚ್ಪಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ಭಾಯ್ ತೊಗಾಡಿಯಾ ಹೇಳಿದ್ದಾರೆ. ಗಡುವನ್ನು ಸರಕಾರ ಪರಿಗಣಿಸದೇ ಇದ್ದರೆ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಕೇಂದ್ರದ ಗುಣಾತ್ಮಕ ಇಂಗಿತಗಳು ಮಾತ್ರ ನಮ್ಮನ್ನು ತಲುಪುತ್ತಿದೆಯೇ ಹೊರತು ಯಾವುದೇ ರೀತಿಯ ಕ್ರಿಯಾತ್ಮಕ ಭರವಸೆಗಳು ದೊರೆತಿಲ್ಲ. ವಾಜಪೇಯಿ ಈಗಾಗಲೇ ವಿಎಚ್ಪಿ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂದಿನ ತಿಂಗಳು ಜನವರಿ 27ರಂದು ಸಾಧು ಸಂತರ ಸಭೆಯಾಂದನ್ನು ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ಮುಂದಿನ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಭೂಮಿಯನ್ನು ಸರಕಾರ ಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡದೇ ಇದ್ದಲ್ಲಿ , ಬೃಹತ್ ಸಾಮೂಹಿಕ ಪ್ರತಿಭಟನೆ ನಡೆಸಲಾಗುವುದು. ರಾಮಮಂದಿರವನ್ನು ವಿರೋಧಿಸಿದ ಎಲ್ಲ ಕೇಂದ್ರ ಸರಕಾರಗಳು ಬಿದ್ದು ಹೋಗಿವೆ ಎಂದ ತೊಗಾಡಿಯಾ ರಾಜೀವ್ ಗಾಂಧಿ, ವಿ.ಪಿ. ಸಿಂಗ್ ಮತ್ತು ನರಸಿಂಹ ರಾವ್ ಸರಕಾರಗಳನ್ನು ಉದಾಹರಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...