ರಂಗ ಪುನರುತ್ಥಾನ
*ವಿಜಯಾ, ಮೈಸೂರು
ದೊಡ್ಡ ನಾಟಕದ ಹಬ್ಬಗಳೂ ಎಷ್ಟೋ ಸಲ ಭಣಭಣ. ನೀರಿನಂತೆ ಹರಿದು ಹೋಗುತ್ತದೆ ಕಾಂಚಾಣ. ಹಾಗೆಂದ ಮಾತ್ರಕ್ಕೆ ರಂಗ ಕ್ಷೇತ್ರದ ಸಾವು ಹತ್ತಿರಾಗಿದೆ ಎಂದಲ್ಲ. ಇಂಥಾ ಹಬ್ಬಗಳನ್ನು ಆಗಾಗ ಹಮ್ಮಿಕೊಳ್ಳುತ್ತಲೇ ಇರಬೇಕು. ಹಾಗೆ ಮಾಡುವುದನ್ನು ನಿಲ್ಲಿಸದಿದ್ದಲ್ಲಿ ರಂಗ ಕ್ಷೇತ್ರಕ್ಕೆ ಖಂಡಿತ ಸಾವಿಲ್ಲ. ಸಭಾ ಭವನದಲ್ಲಿ ಭಾರಿ ಜನರನ್ನು ಸೇರಿಸಿದರಷ್ಟೆ ಸಾಕು. ರಂಗ ಪುನರುಜ್ಜೀವನ ಸಾಧ್ಯ ಎಂಬುದು ಸುಳ್ಳು. ಬೀದಿ ನಾಟಕಗಳ ನೋಡಲು ಜನ ನೆರೆದರೆ ಅದುವೇ ರಂಗ ಪುನರುಜ್ಜೀವನ- ಅರುಂಧತಿ ನಾಗ್.
ಮೈಸೂರಿನಲ್ಲಿ ಎರಡು ದಿನಗಳ ಕಾಲದ ನಾಟಕದ ಹಬ್ಬ. ರಂಗಾಯಣ ಆಯೋಜಿದ್ದ ಅಕ್ಕ ಎಂಬ ರಾಷ್ಟ್ರೀಯ ಮಹಿಳಾ ನಾಟಕಗಳ ರಸದೂಟ ಅದು. ಮಂಗಳವಾರ ಎರಡನೆಯ ದಿನ. ವೈದೇಹಿಯವರ ಕತೆಗಳ ಸೇರಿಸಿ ಪ್ರಸ್ತುತ ಪಡಿಸಿದ ‘ಮಲ್ಲಿನಾಥನ ಧ್ಯಾನ’ ಎಂಬ ನಾಟಕದ ಪ್ರದರ್ಶನದ ಸಮಯದಲ್ಲಿ ಅರುಂಧತಿ ಮಾತಿಗೆ ಸಿಕ್ಕರು. ಅವರ ಮಾತುಗಳಿಗೆ ನೀವೂ ಕಿವಿಗೊಡಿ...
ಯುವಕರು ಚೇಂಜ್ ಕೇಳ್ತಾರೆ
ರಂಗ ಅದಕ್ಕೆ ಸ್ಪಂದಿಸುತ್ತಾ ಹೋಗಬೇಕು. ಆಗ ಮಾತ್ರ ಪುನರುತ್ಥಾನ ಸಾಧ್ಯ. ನನ್ನನ್ನೇ ಉದಾಹರಣೆ ಕೊಡ್ತೀನಿ. 20 ವರ್ಷಗಳಿಂದ ನಾಟಕ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಷ್ಟು ಜನ ನನ್ನನ್ನು ಇವತ್ತು ಗುರುತಿಸುತ್ತಾರೆ, ಹೇಳಿ? ನೆನ್ನೆ ಟಿವಿ ಸೀರಿಯಲ್ಲಲ್ಲಿ ಕಾಣಿಸಿಕೊಳ್ಳುವವರು ಇವತ್ತು ಹೀರೋ ಆಗಿ ಬಿಟ್ಟಿರುತ್ತಾರೆ.
ಇದೊಂದು ರಾಷ್ಟ್ರೀಯ ರಂಗ ಹಬ್ಬ. ಎಷ್ಟು ಶಾಲಾ ಮಕ್ಕಳನ್ನು ಇಲ್ಲಿಗೆ ಕರೆ ತಂದಿದ್ದಾರೆ? ರಂಗ ಹಬ್ಬ, ಉತ್ಸವ, ಮೇಳ ಯಾವುದಕ್ಕೇ ಆಗಲಿ ಪ್ರಾಯೋಜಕರು ಬೇಕು. ದೇಣಿಗೆ ಬೇಕು. ಎಲ್ಲಕ್ಕೂ ಮುಖ್ಯವಾಗಿ ಮೇನೇಜ್ಮೆಂಟ್ ಹಾಗೂ ಪ್ರೇಕ್ಷಕ ವರ್ಗಕ್ಕೆ ಉತ್ಸಾಹ ಇರಬೇಕು.
ಓದು ಬರೆಹ ಬರುವ ಜನರಲ್ಲೇ ರಂಗದ ಬಗೆಗೆ ಆಸಕ್ತಿ ಕುಂದುತ್ತಿದೆ. ಇನ್ನು ನಿರಕ್ಷರ ಕುಕ್ಷಿಗಳಿಗೆ ಅದು ತಲುಪುವುದು ಹೇಗೆ? ಕಲಾ ಪರಂಪರೆಯನ್ನು ಉಳಿಸಿ, ಬೆಳೆಸುವುದು ಪ್ರಸ್ತುತದ ಸವಾಲು ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ರಂಗ ಶಂಕರ ಯೋಜನೆ ಇದಕ್ಕೊಂದು ದಿಟ್ಟ ಉತ್ತರವಾಗಲಿದೆ. ಸರ್ಕಾರ ಕೂಡ ಬೆನ್ನು ತಟ್ಟುತ್ತಿದೆ. ಎರಡೂವರೆ ಕೋಟಿ ರುಪಾಯಿಗಳಷ್ಟು ದುಬಾರಿ ಕನಸಿದು. ನನಸಾಗುತ್ತಿದೆ.
ವರ್ಷಕ್ಕೆ 300 ನಾಟಕ ಆಡಿಸುವುದು ನನ್ನ ಗುರಿ
ಚಿಕ್ಕ ಪುಟ್ಟ ರಂಗ ತಂಡಗಳಿಗೆ ರಂಗ ಶಂಕರ ಬೆನ್ನು ತಟ್ಟಲಿದೆ. ಶಾಲೆಗಳೊಂದಿಗೆ ಕೈಜೋಡಿಸಿ, ಅಲ್ಲಿನ ಮಕ್ಕಳಿಗೂ ರಂಗ ಕಲೆ ಹೇಳಿಕೊಡುವುದು; ಸೆಟ್ ಮತ್ತು ಉಡುಗೆ ಬ್ಯಾಂಕ್ ಸಿದ್ಧ ಮಾಡುವುದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗೋತ್ಸವಗಳನ್ನು, ನಾಟಕ ಸ್ಪರ್ಧೆಗಳನ್ನು ನಡೆಸುವುದು ನನ್ನ ಯೋಚನೆಗಳು.
ಸಿ.ಆರ್.ಸಿಂಹ ಗರ್ಜಿಸುತ್ತಿರುವ, ನೀನಾಸಂ ಸದ್ದು ಮಾಡುತ್ತಿರುವ, ರಂಗಾಯಣ ಇಂಥಾ ಹಬ್ಬವನ್ನು ಆಯೋಜಿಸುತ್ತಿರುವ ಈ ಹೊತ್ತಲ್ಲಿ ದೊಡ್ಡ ಕನಸನ್ನು ಹೊತ್ತ ಅರುಂಧತಿಯಂಥವರ ಠರಾವೂ ಸೇರಿದೆ. ಅಂದಮೇಲೆ ರಂಗ ಕ್ಷೇತ್ರ ಮೈದಡವಿಕೊಂಡು ಏಳುವ ದಿನಗಳು ದೂರವಿಲ್ಲ ಎನ್ನಬಹುದಲ್ಲವೇ?
What do you think about this article ?
ಮುಖಪುಟ / ಲೋಕೋಭಿನ್ನರುಚಿ