ಹಾನಗಲ್ ಬಳಿ ಗುಂಪು ಘರ್ಷಣೆ ;ಗೋಲಿಬಾರ್ಗೆ ಒಬ್ಬನ ಬಲಿ
ಹಾವೇರಿ : ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಸೋಮವಾರ ಭುಗಿಲೆದ್ದ ಎರಡು ಗ್ರಾಮಸ್ಥರ ನಡುವಣ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಒಬ್ಬನು ಮೃತನಾಗಿದ್ದು ಐವರು ಗಾಯಗೊಂಡಿದ್ದಾರೆ.
ಕಾರವಾರ ಜಿಲ್ಲೆಯ ಪಾಳ ಹಾಗೂ ಹಾನಗಲ್ಲ ತಾಲ್ಲೂಕಿನ ಹುಲಗಿನಕೊಪ್ಪ ಗ್ರಾಮಸ್ಥರ ನಡುವೆ ಘರ್ಷಣೆ ಸಂಭವಿಸಿದ್ದು , ಲಾಠಿಚಾರ್ಜ್- ಅಶ್ರುವಾಯು ಸಿಡಿತ ವಿಫಲಗೊಂಡಾಗ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. ಈ ಗೋಲಿಬಾರ್ನಲ್ಲಿ ಮೃತನಾದ ವ್ಯಕ್ತಿಯನ್ನು ಶಿವಪ್ಪ ಆಡೂರ(27) ಎಂದು ಗುರ್ತಿಸಲಾಗಿದೆ.
ಘರ್ಷಣೆಯಲ್ಲಿ ಗಾಯಗೊಂಡಿರುವ ಲಕ್ಷ್ಮಣ ನಿಂಗಪ್ಪ ಹಾಲಳ್ಳಿ, ನಾಗರಾಜ ಹನುಮಂತಪ್ಪ ಚಲವಾದಿ, ಹನುಮಂತಪ್ಪ ಬಂಡಿ ವಡ್ಡರ, ಹಂಪಪ್ಪ ಪಾಳದ ಎಂಬುವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹಾನಗಲ್ಲದ ಸಿಪಿಐ ಸೇರಿದಂತೆ ನಾಲ್ವರು ಪೊಲೀಸ್ ಪೇದೆಗಳು ಗಾಯಗೊಂಡಿದ್ದು , ಹಾನಗಲ್ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಪು ಘರ್ಷಣೆ ಕಾಲದಲ್ಲಿ 8 ಬಣವೆ, 2 ಮನೆ ಹಾಗೂ 2 ದನದ ಕೊಟ್ಟಿಗೆ ಬೆಂಕಿಗೆ ತುತ್ತಾಗಿವೆ.
ಘರ್ಷಣೆ ನಡೆದದ್ದು ಏಕೆಂದರೆ....
ಕಾರವಾರ ಜಿಲ್ಲೆಯ ಪಾಳದಲ್ಲಿ ಭಾನುವಾರ ನಡೆದ ಕೊಬ್ರಿ ಹೋರಿ ಸ್ಪರ್ಧೆಯ ಸಂದರ್ಭದಲ್ಲಿ ಹುಲಗಿನಕೊಪ್ಪ ಹಾಗೂ ಪಾಳ ಗ್ರಾಮಸ್ಥರ ನಡುವೆ ದನ ಹಿಡಿಯುವ ವಿಷಯದ ಕುರಿತಾಗಿ ಗಲಾಟೆ ನಡೆದಿತ್ತು . ತಕ್ಷಣವೇ ಮುಂಡಗೋಡದ ಪೊಲೀಸರು ಉಭಯ ಗ್ರಾಮಸ್ಥರ ನಡುವೆ ಖಾಜಿ ಸಂಧಾನ ನಡೆಸಿದರೂ, ಸೋಮವಾರ ಬೆಳಗ್ಗೆ ಹುಲಗಿನಕೊಪ್ಪ ಜನರು ಪಾಳದಿಂದ ಹಾನಗಲ್ಗೆ ಹೊರಟಿದ್ದ ಖಾಸಗಿ ಹಾಗೂ ಸರ್ಕಾರಿ ಬಸ್ ತಡೆದು, ಪಾಳದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದಾಗ ವೈಮನಸ್ಯ ಮತ್ತೆ ಭುಗಿಲೆದ್ದು ಗುಂಪು ಘರ್ಷಣೆ ಸ್ವರೂಪ ತಳೆಯಿತು.
ಪ್ರಸ್ತುತ ಪಾಳ ಹಾಗೂ ಹುಲಗಿನಕೊಪ್ಪ ಗ್ರಾಮಗಳಲ್ಲಿ ಪೊಲೀಸ್ ಪಡೆಗಳು ಬಿಡಾರ ಹೂಡಿದ್ದು , ಎರಡೂ ಗ್ರಾಮಗಳಲ್ಲಿ ಬಿಗು ವಾತಾವರಣ ಮುಂದುವರಿದಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...