ಪೀಣ್ಯಾ ಬಳಿ ಹಾರ್ಡ್ವೇರ್ ಪಾರ್ಕ್ ಸ್ಥಾಪಿಸಲು ಸರಕಾರದ ಚಿಂತನೆ
ಬೆಂಗಳೂರು : ಹಾರ್ಡ್ವೇರ್ ವಲಯಕ್ಕೆ ವಿದೇಶೀ ಬಂಡವಾಳವನ್ನು ಸೆಳೆಯಲು ಕರ್ನಾಟಕ ಸರಕಾರ ಶೀಘ್ರವೇ ಪೀಣ್ಯಾ ಬಳಿ ವಿಶೇಷ ಆರ್ಥಿಕ ವಲಯದಡಿ ಹಾರ್ಡ್ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವ ಬಗ್ಗೆ ಚಿಂತಿಸುತ್ತಿದೆ. ಈ ವಿಷಯವನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ದೇಶವು ಹಾರ್ಡ್ವೇರ್ ಕ್ಷೇತ್ರದ ವಿಶ್ವ ಮಾರುಕಟ್ಟೆಯನ್ನು ಕೈವಶಪಡಿಸಿಕೊಳ್ಳಲಿದೆ ಎಂಬ ಭೀತಿಯೂ ರಾಜ್ಯ ಸರಕಾರದ ಈ ನಿರ್ಧಾರಕ್ಕೆ ಕಾರಣವಾಗಿದೆ. ಅತಿದೊಡ್ಡ ಹಾರ್ಡ್ವೇರ್ ವಲಯ ಹೊಂದಿರುವ ಚೀನಾ ಇಡೀ ವಿಶ್ವ ಮಾರುಕಟ್ಟೆಯಲ್ಲೇ ಸಾರ್ವಭೌಮ ಮೆರೆಯುವ ಸಾಧ್ಯತೆ ಇದ್ದು, ಅದಕ್ಕೆ ಪ್ರತಿಸ್ಪರ್ಧೆ ಒಡ್ಡಲು ಕರ್ನಾಟಕ ಮಾತ್ರ ಸಮರ್ಥವಾಗಿದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯ.
ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗದಿದ್ದರೆ, ನಾವು ಅವಕಾಶ ವಂಚಿತರಾಗಬೇಕಾದೀತೆಂದು ರಾಜ್ಯ ಸರಕಾರ ಈ ನಿಟ್ಟಿನಲ್ಲಿ ತುರ್ತು ಚಿಂತನೆ ನಡೆಸಿದೆ. ಸರಕಾರ ತುರ್ತು ಕ್ರಮ ಕೈಗೊಳ್ಳದಿದ್ದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ರಾಜ್ಯ ಸಾಧಿಸಿರುವ ಸಾಧನೆಗೂ ಪೆಟ್ಟು ಬೀಳುವ ಸಾಧ್ಯತೆಗಳಿವೆ.
ಈ ನಿಟ್ಟಿನಲ್ಲಿ ಈಗಾಗಲೇ ಇಲಾಖೆಯು ರಾಜ್ಯ ಸರಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದು, ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅನುಮತಿಗಾಗಿ ಕಾಯುತ್ತಿದೆ. ರಾಜ್ಯದ ಅನುಮತಿ ಸಿಕ್ಕ ಕೂಡಲೇ ಕೇಂದ್ರ ಸರಕಾರದ ಅನುಮತಿ ಪಡೆದು ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಉದ್ದೇಶ ಇಲಾಖೆಯದಾಗಿದೆ.
ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಪೀಣ್ಯವನ್ನು ಗುರುತಿಸಿದೆ. ಈ ವಿಶೇಷ ಆರ್ಥಿಕ ವಲಯ ಕೇಂದ್ರ ಹಾಗೂ ರಾಜ್ಯ ಸರಕಾರದ ಹಿಡಿತದಲ್ಲಿರುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರದ ಅನುಮತಿ ಸಿಕ್ಕರೆ, ಪೀಣ್ಯಾದಲ್ಲಿ ಹಾರ್ಡ್ವೇರ್ ಟೆಕ್ನಾಲಜಿ ಪಾರ್ಕ್ ತಲೆಎತ್ತುವ ಕಾಲ ದೂರವೇನಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ