ಹಾಸನ- ಮಂಗಳೂರು ನಡುವೆ ಬ್ರಾಡ್ಗೇಜ್ ಭರವಸೆ
ಮಂಗಳೂರು : ಹಾಸನ- ಮಂಗಳೂರು ರೈಲು ಮಾರ್ಗವನ್ನು ಬ್ರಾಡ್ಗೇಜ್ಗೆ ಪರಿವರ್ತಿಸುವ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಓ. ರಾಜಗೋಪಾಲ್ ಭರವಸೆ ನೀಡಿದ್ದಾರೆ.
ಮಂಗಳೂರು - ತಿರುವನಂತಪುರ ನಡುವಣ ನೂತನ ಮಾವೇಲಿ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡುತ್ತಿದ್ದ ಸಚಿವರು, ಈಗಾಗಲೇ ಹಾಸನ ಸಕಲೇಶಪುರ ನಡುವಿನ ರೈಲು ಹಳಿ ಕಾಮಗಾರಿ ಮುಕ್ತಾಯಗೊಂಡಿದೆ, ಸಕಲೇಶಪುರ- ಸುಬ್ರಹ್ಮಣ್ಯ ಮಧ್ಯೆ ಸುರಂಗಗಳ ಕಾಮಗಾರಿಯೂ ಬಹುತೇಕ ಅಂತಿಮ ಹಂತದಲ್ಲಿದೆ ಎಂದರು.
ಸುಬ್ರಹ್ಮಣ್ಯದಿಂದ ಕಂಕನಾಡಿವರೆಗಿನ ಹಳಿಮಾರ್ಗದಲ್ಲಿ ಭೂಮಿಯನ್ನು ಸಮತಟ್ಟು ಮಾಡುವ ಕಾರ್ಯ ಶೇ.95ರಷ್ಟು ಮುಕ್ತಾಯವಾಗಿದೆ. ಮಂಗಳೂರು ರೈಲು ನಿಲ್ದಾಣದ ಅಭಿವೃದ್ಧಿಗಾಗಿ 3.65 ಕೋಟಿ ರುಪಾಯಿಗಳ ಕಾಮಗಾರಿಯನ್ನು ಪೂರ್ಣಗೊಳಿಸಿ, ಮಂಗಳೂರನ್ನು ಮಾದರಿ ರೈಲು ನಿಲ್ದಾಣವನ್ನಾಗಿ ಪರಿವರ್ತಿಸಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಜವಳಿ ಸಚಿವ ವಿ. ಧನಂಜಯಕುಮಾರ್ ಮಂಗಳೂರು - ಹಾಸನ ನಡುವಿನ ಬ್ರಾಡ್ಗೇಜ್ ಕಾಮಗಾರಿ ಡಿಸೆಂಬರ್ 2002ರೊಳಗೆ ಪೂರ್ಣಗೊಳಿಸಲಾಗುವುದು ಎಂದರು. ಈ ಕಾಮಗಾರಿ ವಿಳಂಬವಾದರೆ, ತಾವು ಹೋರಾಟ ನಡೆಸುವುದಾಗಿಯೂ ಕುಮಾರ್ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಮನಾಥ ರೈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
(ಮಂಗಳೂರು ಪ್ರತಿನಿಧಿಯಿಂದ)
ಮುಖಪುಟ / ಇವತ್ತು... ಈ ಹೊತ್ತು...