ಕಾಡಿನಿಂದ ಎಸ್ಟಿಎಫ್ ಕಾಲ್ತೆಗೆಯಲಿ, ಮಾತಿಗೆ ಬನ್ನಿ-ವೀರಪ್ಪನ್
ಬೆಂಗಳೂರು : ನವೆಂಬರ್ 7ರಂದೇ ಯಾವುದೋ ವ್ಯಕ್ತಿಯ ಮೂಲಕ ವೀರಪ್ಪನ್ ತಲುಪಿಸಿದ ಕೆಸೆಟ್ಟನ್ನು ತಮಿಳು ನಿಯತಕಾಲಿಕ ನೇಟ್ರಿಕನ್ನ ಸಂಪಾದಕ ಎ.ಎಸ್.ಮಣಿ ಶನಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. 7 ನಿಮಿಷಗಳ ಮಾತಿರುವ ಈ ಕೆಸೆಟ್ಟಿನಲ್ಲಿ ಶರಣಾಗತಿಗೆ ಸಿದ್ಧವಿರುವುದಾಗಿ ವೀರಪ್ಪನ್ ಹೇಳಿದ್ದಾನೆ.
ತನಗೆ ಗೊತ್ತಿರುವ ಒಬ್ಬ ವ್ಯಕ್ತಿಯ ಮೂಲಕ ಗುಟ್ಟಾಗಿ ನವೆಂಬರ್ 7ರಂದು ವೀರಪ್ಪನ್ ಕೆಸೆಟ್ ತಲುಪಿಸಿದ. 9ನೇ ತಾರೀಖು ಮುಖ್ಯಮಂತ್ರಿಗಳ ಕಚೇರಿಗೆ ಹೋದೆ. ಈ ಬಗ್ಗೆ ಮಾತಾಡಲು ಮುಖ್ಯಮಂತ್ರಿಗಳನ್ನು ಒಪ್ಪಿಸಲು ಪ್ರಯತ್ನಿಸಿದೆ. ಫ್ಯಾಕ್ಸ್ ಮಾಡುವಂತೆ ಸಿಬ್ಬಂದಿ ಹೇಳಿ ಕಳುಹಿಸಿದರು. ಅಂದೇ ಫ್ಯಾಕ್ಸ್ ಮಾಡಿದೆ. ಉತ್ತರ ಇದುವರೆಗೆ ಬಂದಿಲ್ಲ. ಅದಕ್ಕಾಗೇ ಮಾಧ್ಯಮಗಳಿಗೆ ಈ ವಿಷಯ ತಿಳಿಸುತ್ತಿದ್ದೇನೆ. ಅವನು ಕ್ಷಮಾದಾನ ಕೇಳಿದ್ದಾನೆ. ಶರಣಾಗತಿಗೆ ಸಿದ್ಧನಾಗಿದ್ದಾನೆ. ಸಂಧಾನಕ್ಕೆ ಅನುಮತಿ ಸಿಕ್ಕರೆ ತೆರಳಲು ನಾನು ಸಿದ್ಧ. ಕೆಸೆಟ್ಟಿನಲ್ಲಿರುವ ಕಂಠ ವೀರಪ್ಪನದೇ. 1998ರಲ್ಲಿ ಅವನನ್ನು ನಾನು 3 ಬಾರಿ ಭೇಟಿಯಾಗಿದ್ದೇನೆ. ಆತನ ಮೂವರು ಸಹಚರರು ಶರಣಾಗತಿಯಾಗಲು ಸಹಕರಿಸಿದ್ದು ನಾನೇ ಎಂದು ಮಣಿ ಹೇಳಿಕೊಂಡರು.
ಕೆಸೆಟ್ಟಿನಲ್ಲಿ ವೀರಪ್ಪನ್ ಮಾತಿನ ಸಾರ ಹೀಗಿದೆ....
- ನನಗೆ ನಿನ್ನಲ್ಲಿ (ಮಣಿ) ನಂಬಿಕೆ ಇದೆ. ಆದರೂ ನೀನು ಈ ಹಿಂದೆ ನನ್ನ ಮಾತನ್ನು ಕೇಳದೆ ಆ ವಕೀಲನ(ಹೆಸರು ಹೇಳಿಲ್ಲ) ತಪ್ಪು ಸಲಹೆಗೆ ಕಟ್ಟುಬಿದ್ದೆ.
- ಈ ಕೆಸೆಟ್ಟನ್ನು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮುಂದೆ ಪ್ಲೇ ಮಾಡು. ಅವರೊಟ್ಟಿಗೆ ಮಾತನಾಡಿ, ನೀನು ನಂಬುವ ಯಾರನ್ನಾದರೂ ಕರೆದುಕೊಂಡು ಬಾ.
- ನನ್ನ ಶರಣಾಗತಿ ಬಗ್ಗೆ ಈಗಲೇ ಮಾತಾಡಬೇಕಾದರೆ, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಕಾಡಿನಿಂದ ಕಾಲ್ತೆಗೆಯಬೇಕು. ‘ಪೊಲೀಸರ ಕಾರ್ಯಾಚರಣೆ ಸ್ಥಗಿತಗೊಂಡಿದೆ. ನಾನು ನಿನ್ನೊಟ್ಟಿಗೆ ಮಾತಾಡಲು ಸಿದ್ಧ’ ಎಂದು ಪತ್ರಿಕೆ ಮತ್ತು ರೇಡಿಯೋಗಳಲ್ಲಿ ನೀನು ಪ್ರಕಟಿಸಬೇಕು.
- ನನ್ನಲ್ಲಿ ನಿನಗೆ ನಂಬಿಕೆಯಿದ್ದರೆ ಮಾತ್ರ ಮಾತುಕತೆಗೆ ಬಾ. ಇಲ್ಲವಾದರೆ ಬೇಡ. ನನಗೆ ನಿನ್ನನ್ನು ಕೊಲ್ಲುವ ಇರಾದೆಯಿಲ್ಲ. ಅದನ್ನು ಬೇಕಾದರೆ ನಿನ್ನ ಕಚೇರಿಯಲ್ಲೇ ಮಾಡಬಲ್ಲೆ.
- ಮಾತುಕತೆಗೆ ನೀನು ಒಪ್ಪಿದ ನಂತರ, ನನ್ನ ಒಬ್ಬ ವ್ಯಕ್ತಿ ಇನ್ನೊಂದು ಕೆಸೆಟ್ ಕೊಡುತ್ತಾನೆ. ಆಮೇಲೆ ನೀನು ಕಾಡಿಗೆ ಬಂದು ಮಾತಾಡಬಹುದು. ಶರಣಾಗತಿಗೆ ನಾನು ಸಿದ್ಧ. ಆದರೆ, ಏನಾಗುತ್ತದೋ ನೋಡೋಣ. ಅದಕ್ಕೆ ಕೆಲವು ಷರತ್ತುಗಳೂ ಇವೆ
- ಅಂಧಿಯೂರಿನ ಅಂಗಡಿಯಾಂದರಲ್ಲಿ ದಿನಸಿ ಲೂಟಿಯಾಗಿದ್ದಕ್ಕೆ ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಆ ಕೆಲಸ ಮಾಡಿರುವವರು ನನ್ನವರಲ್ಲ. ದಿನಸಿ ಲೂಟಿ ಮಾಡುವ ಅವಶ್ಯಕತೆ ನನಗಿಲ್ಲ. ಬೇಕಾದರೆ ನಾನೇ ಪೊಲೀಸರಿಗೆ ಲೋಡುಗಟ್ಟಲೆ ದಿನಸಿ ಕಳಿಸಬಲ್ಲೆ. ಜನ ನನ್ನೊಡನಿದ್ದಾರೆ. ಆ ಲೂಟಿ ಮಾಡಿರುವುದು ವೀರಪ್ಪನ್ ಎಂದು ಹೇಳಿಕೊಳ್ಳುತ್ತಿರುವ ಕನ್ನಡದ ಒಬ್ಬ ಆಸಾಮಿ!
- ಮತ್ತೆ ಹೇಳುತ್ತೇನೆ. ಮಾತುಕತೆ ಆಗಬೇಕಾದರೆ, ವಿಶೇಷ ಕಾರ್ಯಾಚರಣೆ ಪಡೆಗಳು ಕಾಡಿನಿಂದ ನಾಡಿಗೆ ವಾಪಸ್ಸಾಗಬೇಕು. ಧನ್ಯವಾದಗಳು.
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ