ಮಕ್ಕಳ ಶಿಕ್ಷಣಕ್ಕೆ ಎಂಥ ಪರಿಸರ ಸರಿ? ಪ್ರೊ.ಎಸ್.ಗೋಪಾಲ್ ಪ್ರಕಾರ..
ಮಂಗಳೂರು : ಯಾವುದೇ ಒತ್ತಡಗಳಿಲ್ಲದ ಸಹಜ ವಾತಾವರಣದಲ್ಲಿ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಇವತ್ತಿನ ಆಧುನಿಕ ವಿಜ್ಞಾನ ಯುಗದಲ್ಲಿ ಹೆಚ್ಚು ಪರಿಣಾಮಕಾರಿಯಾದ ಶಿಕ್ಷಣ ಕ್ರಮವಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಎಸ್. ಗೋಪಾಲ್ ಹೇಳಿದ್ದಾರೆ.
ಅಕ್ಷರ ಎಂಬ ಮಾಂಟೆಸ್ಸರಿ ಸ್ಕೂಲ್ ಆಫ್ ಚಿಲ್ಡ ್ರನ್ ನರ್ಸರಿ ಶಾಲೆಯನ್ನು ಮಕ್ಕಳ ದಿನಾಚರಣೆಯಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯೇನಪೋಯ ಸೆಂಟರ್ ಈ ನರ್ಸರಿ ಶಾಲೆಯನ್ನು ಆರಂಭಿಸುತ್ತಿದೆ.
ವಿಜ್ಞಾನದ ಮೂಲಕ ತಂತ್ರಜ್ಞಾನದ ಅಭಿವೃದ್ಧಿಯಾಗುತ್ತದೆ. ಆದರೆ ಇವತ್ತು ಅಗತ್ಯವಾಗಿರುವುದು ಮನುಕುಲ ಶಾಂತಿಯನ್ನು ಹರಡುವ ಶಿಕ್ಷಣ. ಜಗತ್ತಿನಲ್ಲಿ ಹಿಂಸೆ ಹೆಚ್ಚುತ್ತಿದೆ. ಶೈಕ್ಷಣಿಕ ವಲಯದಲ್ಲಿ ನೈತಿಕ ಶಿಕ್ಷಣದ ಕೊರತೆಯೇ ಇದಕ್ಕೆ ಕಾರಣ ಎಂದು ಗೋಪಾಲ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭುವನೇಶ್ವರದ ಶಿಕ್ಷಣ ತಜ್ಞ ಅಮುಕ್ತ ಮಹಾಪತ್ರ ಅವರು, ನರ್ಸರಿ ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿದರು. ಮಕ್ಕಳ ಆಶೋತ್ತರಗಳನ್ನು ಪ್ರೋತ್ಸಾಹಿಸಬೇಕೇ ಹೊರತು ಅದುಮಿಡುವಂತೆ ಗದರಬಾರದು. ಆಗ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಬೆಳಕಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಮಾಂಟೆಸ್ಸರಿ ಶಿಕ್ಷಣ ಪೂರಕವಾದುದು ಎಂದು ಅಮುಕ್ತ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...