‘ನೃಪತುಂಗ’ನನ್ನು ಏಕಮುಖ ತೆಕ್ಕೆಯಿಂದ ಬಿಡಿಸಿದ ಸಾಂಗ್ಲಿಯಾನ
ಬೆಂಗಳೂರು : ಏಕಮುಖ ಸಂಚಾರದ ತೆಕ್ಕೆಗೆ ಸಿಲುಕಿದ್ದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾದ ನೃಪತುಂಗ ರಸ್ತೆಯಲ್ಲಿ ನ.14ರಿಂದ ದ್ವಿಮುಖ ಸಂಚಾರ ಆರಂಭವಾಗಲಿದೆ. ಇದು ಮಕ್ಕಳ ದಿನಾಚರಣೆ ಕೊಡುಗೆಯೂ ಅಲ್ಲ, ದೀಪಾವಳಿ ಉಡುಗೊರೆಯೂ ಅಲ್ಲ ನಗರ ಪೊಲೀಸ್ ಕಮೀಷನರ್ ಎಚ್.ಟಿ. ಸಾಂಗ್ಲಿಯಾನಾರ ಕೊಡುಗೆ.
ಆಗಸ್ಟ್ 26ರಿಂದ ಜಾರಿಗೆ ಬಂದಿದ್ದ ಏಕಮುಖ ಸಂಚಾರ ವ್ಯವಸ್ಥೆಯನ್ನು ಸಾರ್ವಜನಿಕರ ಬೇಡಿಕೆಯ ಮೇಲೆ ರದ್ದು ಪಡಿಸಿ, ಮತ್ತೆ ದ್ವಿಮುಖ ಸಂಚಾರ ವ್ಯವಸ್ಥೆ ಜಾರಿಗೆ ತಂದಿರುವುದಾಗಿ ಸಾಂಗ್ಲಿಯಾನ ತಿಳಿಸಿದ್ದಾರೆ. ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಹೋಗುವ ರೋಗಿಗಳು, ವಿಧಾನಸೌಧ, ನ್ಯಾಯಾಲಯ ಹಾಗೂ ಸರಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಮತ್ತು ಸಿಬ್ಬಂದಿಗೆ ಏಕಮುಖ ಸಂಚಾರ ವ್ಯವಸ್ಥೆಯಿಂದ ಉಂಟಾಗಿದ್ದ ತೊಂದರೆ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನೃಪತುಂಗ ರಸ್ತೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಜಾರಿಗೆ ತಂದಿದ್ದರೂ, ಪೊಲೀಸ್ ಕಾರ್ನರ್ನಿಂದ ಕೆ.ಆರ್.ವೃತ್ತದ ಕಡೆಗೆ (ನೃಪತುಂಗ ರಸ್ತೆಯಲ್ಲಿ ) ಕೇವಲ ದ್ವಿಚಕ್ರವಾಹನಗಳು ಮತ್ತು ಲಘು ಮೋಟಾರು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಆದರೆ, ಅದರ ವಿರುದ್ಧ ದಿಕ್ಕಿನಲ್ಲಿ ಅಂದರೆ ಕೆ.ಆರ್. ವೃತ್ತದಿಂದ ಪೊಲೀಸ್ ಕಾರ್ನರ್ ಕಡೆಗೆ ಬಿಎಂಟಿಸಿ ಬಸ್ಗಳು, ತಳ್ಳುವ ಗಾಡಿಗಳು, ಜಟಕಾಬಂಡಿ, ಎತ್ತಿನಗಾಡಿಗಳೂ ಸಂಚರಿಸಬಹುದಾಗಿದೆ. ನೃಪತುಂಗ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ನವೆಂಬರ್ 14ರಿಂದ ಸಂಪೂರ್ಣ ನಿಷೇಧಿಸಲಾಗಿದೆ ಎಂದೂ ಸಾಂಗ್ಲಿಯಾನ ತಿಳಿಸಿದ್ದಾರೆ.
ಮುಖಪುಟ / ಸಾಂಗ್ಲಿಯಾನ ವಾಚ್