ರೈತರ ಮಕ್ಕಳ ಮದುವೆ,ಶಿಕ್ಷಣಕ್ಕೆ ಸರ್ಕಾರದಿಂದ ಸಾಲ ಯೋಜನೆ
ಬೆಂಗಳೂರು : ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ಶಿಕ್ಷಣ ಸಾಲ ಮತ್ತು ಮದುವೆ ಸಾಲಗಳ ಅಪೂರ್ವ ಯೋಜನೆಯಾಂದನ್ನು ರೂಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಹಕಾರ ಸಚಿವ ಡಿ.ಕೆ. ಶಿವಕುಮಾರ್, ಹೊಸ ಯೋಜನೆಯನ್ನು ರಾಜ್ಯದ ಸಹಕಾರಿ ಸಂಸ್ಥೆಗಳಾದ ಅಪೆಕ್ಸ್ ಬ್ಯಾಂಕ್ಗಳ ಮೂಲಕ ಜಾರಿಗೆ ತರಲಾಗುವುದು ಎಂದರು. ಇತ್ತೀಚೆಗೆ ಕಿಸಾನ್ ಕಾರ್ಡ್ಗಳನ್ನು ಪಡೆದಿರುವ ರೈತರ ಮಕ್ಕಳು ಈ ಶೈಕ್ಷಣಿಕ ಸಾಲ ಮತ್ತು ಮದುವೆ ಸಾಲಕ್ಕೆ ಅರ್ಹರಾಗಿರುತ್ತಾರೆ.
ರೈತರು ತಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೇ ಈ ಸಾಲವನ್ನು ತೆಗೆದುಕೊಳ್ಳಬಹುದು. ಸದ್ಯದಲ್ಲಿಯೇ ಈ ಯೋಜನೆಯನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುವುದು. ಮದುವೆ ಸಾಲದಂತಹ ಸಾಮಾಜಿಕ ಬದ್ಧತೆಗಳಿಗೆ ಪೂರಕವಾದ ನೆರವು ನೀಡುವುದರಿಂದ ರೈತರು ಖಾಸಗಿ ಸಾಲಗಳ ಮೊರೆ ಹೋಗಿ ಅಧಿಕ ಬಡ್ಡಿ ಕಟ್ಟುತ್ತಾ ಸವೆಯಬೇಕಾಗಿಲ್ಲ ಎಂದು ಶಿವಕುಮಾರ್ ಹೇಳಿದರು.
ಸರಕಾರವು ಈ ವರ್ಷ ಸಹಕಾರ ಸಂಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು 1,610 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಇದರಲ್ಲಿ ಶೇಕಡಾ 87 ರಷ್ಟು ಹಣ 10 ಲಕ್ಷ ಮಂದಿ ರೈತರಿಗಾಗಿ ಬಳಕೆಯಾಗಿದೆ. ಬುಧವಾರ(ನ.14)ದಿಂದ ವಿವಿಧ ಕಾರ್ಯಕ್ರಮ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ 48ನೇ ಸಹಕಾರಿ ಸಪ್ತಾಹವನ್ನು ಆಚರಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...