ರಾಜ್ಯಾದ್ಯಂತ ಎನ್ಡಿಎ ಸಾಧನೆಗಳ ಶಂಖ ಊದಲಿರುವ ಬಿಜೆಪಿ ಶಾಸಕರು
ಹುಬ್ಬಳ್ಳಿ : ಎನ್ಡಿಎ ಸರಕಾರದ ಸಾಧನೆಗಳನ್ನು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ಶಾಸಕರ 15 ತಂಡಗಳು ನವೆಂಬರ್ 19ರಿಂದ ಡಿಸೆಂಬರ್ 20ರವೆರೆಗೆ ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವಿಷಯವನ್ನು ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ಅವರು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುವಲ್ಲಿ ಸೋತಿದೆ ಎಂದರು. ಸರಕಾರ ಸಾಕಷ್ಟು ವಿದ್ಯುತ್ ಒದಗಿಸುವುದಾಗಿ ರೈತರಿಗೆ ಭರವಸೆ ನೀಡಿದ್ದರೂ ದಿನಕ್ಕೆ ಸುಮಾರು 10ರಿಂದ 12 ಗಂಟೆಗಳ ಕಾಲ ರೈತರ ಪಂಪ್ ಸೆಟ್ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿಲ್ಲ ಎಂದು ದೂರಿದರು.
ಕಳೆದ ನಾಲ್ಕು ವರ್ಷದಿಂದ ಬಾಕಿಯಿದ್ದ 300 ಕೋಟಿ ರೂಪಾಯಿ ಬಾಕಿ ಸಬ್ಸಿಡಿಯನ್ನೂ ರಾಜ್ಯ ಸರಕಾರ ಸಣ್ಣ ಕೈಗಾರಿಕೆಗಳಿಗೆ ನೀಡಿಲ್ಲ ಎಂದು ಆಕ್ಷೇಪಿಸಿದ ಶೆಟ್ಟರ್, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರಕಾರದ ಧೋರಣೆಯನ್ನು ವಿರೋಧಿಸಿ ಪ್ರತಿಭಟನೆಗಳನ್ನು ಆಯೋಜಿಸಲಾಗುವುದು ಎಂದರು.