ಕಾಫಿ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ- ಕೃಷ್ಣ
ಬೆಂಗಳೂರು: ರಾಜ್ಯದ ಕಾಫಿ ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಗಳವಾರ ಪ್ರಕಟಿಸಿದ್ದಾರೆ.
ಕರ್ನಾಟಕ ಕಾಫಿ ಬೆಳೆಗಾರರ ವಾರ್ಷಿಕ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡುತ್ತಿದ್ದ ಕೃಷ್ಣ , ಕಾಫಿ ಬೆಳೆಯ ಮೇಲಿನ ತೆರಿಗೆಯನ್ನು ಒಂದು ವರ್ಷದ ಮಟ್ಟಿಗೆ ರದ್ದು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು. ಒಂದು ವರ್ಷದ ನಂತರ ಕಾಫಿ ಬೆಳೆಗಾರರು ಕಂತುಗಳಲ್ಲಿ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ ಎಂದರು.
ಒಟ್ಟು ಮೂರು ಲಕ್ಷ ಟನ್ ಕಾಫಿಯನ್ನು ಭಾರತ ಪ್ರತಿವರ್ಷ ಉತ್ಪಾದಿಸುತ್ತಿದ್ದು , ಇದರಲ್ಲಿ ಪ್ರತಿಶತ 70 ರಷ್ಟನ್ನು ಕರ್ನಾಟಕ ಉತ್ಪಾದಿಸುತ್ತಿದೆ. ಕಳೆದ ಮೂರು ದಶಕಗಳಲ್ಲಿ ಕಾಫಿ ಉದ್ಯಮ ಹಿಂದೆಂದೂ ತಲುಪದಷ್ಟು ದುಸ್ಥಿತಿಯನ್ನು ಮುಟ್ಟಿದ್ದು , ಎರಡು ವರ್ಷಗಳ ಮಟ್ಟಿಗೆ ಕಾಫಿ ಬೆಳೆಯ ಮೇಲಿನ ತೆರಿಗೆಯನ್ನು ಮನ್ನಾ ಮಾಡುವಂತೆ ಕಾಫಿ ಬೆಳೆಗಾರರ ಮನವಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಕಾಫಿ ಬೆಳೆ ಮಾತ್ರವಲ್ಲದೆ ಇಡೀ ಕೃಷಿಕ ವಲಯ ಸಂಕಷ್ಟದ ಸುಳಿಯಲ್ಲಿದ್ದು , ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ. ಇಂಥ ಸಂದರ್ಭದಲ್ಲಿ ವಿಶ್ವ ವ್ಯಾಪಾರ ಒಪ್ಪಂದದ ಕುರಿತಾದ ವಿಷಯಗಳಲ್ಲಿ ನಿರ್ಣಯ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರಗಳನ್ನು ಕೇಂದ್ರ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಕೃಷ್ಣ ವಿಷಾದಿಸಿದರು.
ಕಾಫಿಗೆ ಬೆಂಬಲಬೆಲೆ ನೀಡಲು ಧನಂಜಯ ಕುಮಾರ್ ಬೆಂಬಲ
ಕಾಫಿ ಉದ್ಯಮ ತೀವ್ರ ಸಂಕಷ್ಟ ಎದುರಿಸುತ್ತಿರುವುದರಿಂದ ಕಾಫಿಗೆ ಬೆಂಬಲ ಬೆಲೆ ನೀಡುವುದಕ್ಕೆ ತಮ್ಮ ಒಲವಿದೆ ಎಂದು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ವಿ.ಧನಂಜಯ ಕುಮಾರ್ ಹೇಳಿದರು. ಕರ್ನಾಟಕ ಸರ್ಕಾರ ಕಾಫಿಗೆ ಬೆಂಬಲ ಬೆಲೆ ನೀಡಿದಲ್ಲಿ, ಕೇಂದ್ರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯನ್ನು ಕಾಫಿಗೆ ಕೂಡ ವಿಸ್ತರಿಸುವುದಾಗಿ ಅವರು ಹೇಳಿದರು. ರಫ್ತುದಾರರಿಗೆ ಟ್ರಾನ್ಸ್ಪೋರ್ಟ್ ಸಬ್ಸಿಡಿ ನೀಡಲು ಕೇಂದ್ರ ವಿತ್ತ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಧನಂಜಯ ಕುಮಾರ್ ಹೇಳಿದರು.
ಕಾಫಿ ರಫ್ತು ವಾರ್ಷಿಕ 1500 ಕೋಟಿ ರುಪಾಯಿ ಆದಾಯ ತರುತ್ತಿದ್ದು , ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಸಮ್ಮೇಳನದಲ್ಲಿ ಮಾತನಾಡಿದ ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪೀಟರ್ ಮಥಾಯಿಸ್ ಹೇಳಿದರು.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ