ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ನೂತನ ವರ್ಗಾವಣಾ ನೀತಿ
ಬೆಂಗಳೂರು: ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಹೊಸ ವರ್ಗಾವಣೆ ನೀತಿಯನ್ನು ಸರ್ಕಾರ ಸೋಮವಾರ ಅಳವಡಿಸಿದೆ ಎಂದು ವಾರ್ತಾ ಸಚಿವ ಎಂ.ಶಿವಣ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋಮವಾರ ನಡೆದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ- ಪಂಚಾಯತ್ ರಾಜ್ ಸಚಿವ ಎಂ.ವೈ. ಘೋರ್ಪಡೆ ನೇತೃತ್ವದ ಸಂಪುಟ ಉಪ ಸಮಿತಿ ಶಿಫಾರಸ್ಸು ಮಾಡಿದ ನೂತನ ವರ್ಗಾವಣಾ ನೀತಿಯನ್ನು ಸಂಪುಟ ಸಭೆ ಒಪ್ಪಿಕೊಂಡಿದೆ ಎಂದರು.
ಪ್ರತಿ ಇಲಾಖೆಯಲ್ಲಿನ ಒಟ್ಟು ಸಿಬ್ಬಂದಿಯಲ್ಲಿ ಪ್ರತಿಶತ 5 ಮೀರದಂತೆ ವರ್ಗಾವಣೆ ಮಾಡಲು ಅಧಿಕಾರವುಳ್ಳ ಕೇಡರ್ ಮೇನೇಜ್ಮೆಂಟ್ಗಳನ್ನು ಹೊಸ ನೀತಿಯ ಅನ್ವಯ ಸರ್ಕಾರ ನೇಮಿಸಲಿದೆ. ಜಿಲ್ಲಾಧಿಕಾರಿಗಳು ಕೇಡರ್ ಮೇನೇಜ್ಮೆಂಟ್ನ ಮುಖ್ಯಸ್ಥರಾಗಿದ್ದು, ಅವರು ಸಿ ಮತ್ತು ಡಿ ವರ್ಗಗಳ ಸಿಬ್ಬಂದಿಯ ಅಂತರ ಜಿಲ್ಲೆಯ ವರ್ಗಾವಣೆಯನ್ನು ನಿರ್ಣಯಿಸುವರು. ಎ ಮತ್ತು ಬಿ ವರ್ಗದ ಅಧಿಕಾರಿಗಳ ವರ್ಗಾವಣೆ ಸಂಬಂಧ ಆಯಾ ಇಲಾಖೆಯ ಸಚಿವರ ನೇತೃತ್ವದ ಸಮಿತಿ ನಿರ್ಣಯ ಕೈಗೊಳ್ಳುವುದು.
ನೂತನ ವರ್ಗಾವಣೆ ನೀತಿಯು ಪಾರದರ್ಶಕವಾಗಿದ್ದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ ಎಂದು ಶಿವಣ್ಣ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...