ಮರಳಿದ ರಾಜಕೀಯ ಸ್ಥಿರತೆ
ವಾಷಿಂಗ್ಟನ್: ಭಾರತದಲ್ಲಿನ ರಾಜಕೀಯ ಚಿತ್ರಣವೀಗ ಬದಲಾಗಿದ್ದು , ಬಹು ದಿನಗಳ ನಂತರ ರಾಜಕೀಯ ಸ್ಥಿರತೆ ದೇಶದಲ್ಲಿ ಮರಳಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದಾರೆ.
ಅಮೆರಿಕಾದಲ್ಲಿನ ಭಾರತದ ರಾಯಭಾರಿ ಲಲಿತ್ ಮಾನ್ಸಿಂಗ್ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಿದ್ದ ವಾಜಪೇಯಿ, ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎನ್ನುವಂಥ ಪ್ರಶ್ನೆಗಳನ್ನೀಗ ಯಾರೂ ಕೇಳುವಂತಿಲ್ಲ . ಈಗ ದೇಶ ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದೆ ಎಂದರು.
ಮಾತಿನ ನಡು ನಡುವೆ ಅನೇಕ ಹೇಳಿಕೆ, ಚಟಾಕಿಗಳನ್ನು ಬೆರೆಸಿ ಹಿಂದಿಯಲ್ಲಿ ಮಾತನಾಡಿದ ವಾಜಪೇಯಿ ಪ್ರತಿ ಮಾತಿಗೂ ಭಾರೀ ಚಪ್ಪಾಳೆ ಗಿಟ್ಟಿಸಿದರು. ಈ ಮುನ್ನ ಯಾರಾದರೂ ಭಾರತಕ್ಕೆ ಬಂದಾಗ- ನಿಮ್ಮ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂದು ಕೇಳುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ . ಮೂರು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿರುವುದೇ ಒಂದು ದೊಡ್ಡ ಸಾಧನೆ ಎಂದು ವಾಜಪೇಯಿ ಮಾರ್ಮಿಕವಾಗಿ ನುಡಿದರು.
ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರೆ ಮತ್ತೆ ಅಧಿಕಾರಕ್ಕೆ ಬರುವೆ ಎನ್ನುವುದನ್ನೀಗ ವ್ಯಕ್ತಿಗಳು (ಪಕ್ಷಗಳು) ಅರಿತಿದ್ದಾರೆ. ಮೊದಲ ಬಾರಿ 13 ದಿನಗಳಲ್ಲಿಯೇ ನನ್ನನ್ನು ಕುರ್ಚಿಯಿಂದ ಇಳಿಸಲಾಯಿತು. ಆನಂತರ 13 ತಿಂಗಳ ಕಾಲ ಗದ್ದುಗೆಯಲ್ಲಿದ್ದೆ . ಆಮೇಲೆ ನನ್ನನ್ನು ಮತ್ತೆ ಕುರ್ಚಿಯಿಂದ ಇಳಿಸಲಾಯಿತು. ಆದರೆ, ಮತ್ತೆಯೂ ಗದ್ದುಗೆಯೇರಲು ಯಶಸ್ವಿಯಾದೆ. ಪ್ರಸ್ತುತ ದೇಶದಲ್ಲಿ ರಾಜಕೀಯ ಸ್ಥಿರತೆ ಉಂಟಾಗಿದೆ ಎಂದು ಭಾರತದ ಪ್ರಸಕ್ತ ರಾಜಕೀಯ ಸ್ಥಿತ್ಯಂತರಗಳನ್ನು ವಾಜಪೇಯಿ ಬಣ್ಣಿಸಿದರು.
ಭಾರತದ ಮಾರುಕಟ್ಟೆ ದೊಡ್ಡದು
ಕೊಳ್ಳುವ ಶಕ್ತಿ ಭಾರತೀಯರಲ್ಲಿ ಹೆಚ್ಚಾಗಿದ್ದು, ಭಾರತದ ಮಾರುಕಟ್ಟೆ ವಿಶಾಲವಾಗಿ ಬೆಳೆದಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಅರ್ಥ ಜಗತ್ತಿನಲ್ಲಿ ಹಲವಾರು ಬದಲಾವಣೆಗಳು ಉಂಟಾಗಿದ್ದು, ಜಾಗತಿಕ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಆತ್ಮ ವಿಶ್ವಾಸವನ್ನು ದೇಶ ಪಡೆದಿದೆ ಎಂದು ವಾಜಪೇಯಿ ಹೇಳಿದರು.
ಅಮೆರಿಕಾ ಹಾಗೂ ಭಾರತದ ನಡುವಣ ಸಂಬಂಧ ಪ್ರಗತಿ ಪರವಾದುದು. ಆಡಳಿತ ಬದಲಾದರೂ, ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಉತ್ತಮ ಅಂಶಗಳ ನಡುವಣ ಸಂಬಂಧಗಳು ಮುಂದುವರಿಯುತ್ತವೆ ಎಂದು ಅವರು ಹೇಳಿದರು.
ಸಂಸತ್ತಿನ ಮಾನದಂಡಗಳು ಬದಲಾಗುತ್ತಿರುವ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ ವಾಜಪೇಯಿ, ಈ ಮುನ್ನ ಡಕಾಯಿತರಾಗಿದ್ದವರು ಈಗ ಸಂಸತ್ತು ಪ್ರವೇಶಿಸುತ್ತಿದ್ದಾರೆ . ರಾಜಕೀಯದಲ್ಲಿ ಹಣ ಹಾಗೂ ತೋಳ್ಬಲ ಹೆಚ್ಚಾಗುತ್ತಿದ್ದು , ಪರಿಸ್ಥಿತಿ ಬದಲಾಗಬೇಕಿದೆ ಎಂದು ವಾಜಪೇಯಿ ಹೇಳಿದರು.
(ಪಿಟಿಐ)