ತ್ವರೆ ಮಾಡಿ ! ಹಾಸನಾಂಬ ದೇವಾಲಯದ ಬಾಗಿಲು ತರೆದಿದೆ
ಹಾಸನ : ಇಲ್ಲಿನ ಪ್ರಸಿದ್ಧ ಹಾಸನಾಂಬ ದೇವಸ್ಥಾನದ ಬಾಗಿಲು ವಾರ್ಷಿಕ ವಿಧಿಯಂತೆ ಗುರುವಾರ ಅಂದರೆ ನವೆಂಬರ್ 8ರಂದು ಭಕ್ತರಿಗಾಗಿ ಪುನಃ ತೆರೆಯಿತು.
ಮಧ್ಯಾಹ್ನದ ಮಹಾ ಪೂಜೆಯಾಂದಿಗೆ ದೇವಸ್ಥಾನದ ಬಾಗಿಲು ತೆರೆಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದ ಭಕ್ತರು ದೇವರ ದರ್ಶನ ಪಡೆದರು. ಕಳೆದ ವರ್ಷ ಬಾಗಿಲು ಮುಚ್ಚುವಾಗ ದೇವರಿಗೆ ಅಲಂಕಾರಕ್ಕಾಗಿ ಇಟ್ಟ ಹೂವುಗಳು ಈ ವರ್ಷವೂ ಸುವಾಸನೆಯಿಂದಲೇ ಇರುವುದು ಇಲ್ಲಿನ ವಿಶೇಷ.
ದೇವಸ್ಥಾನದ ಬಾಗಿಲು ತೆರೆಯುವಾಗ ಸಂಪ್ರದಾಯದಂತೆ ಊರಿನ ಅರಸು ಮನೆತನದ ನರಸಿಂಹರಾಜ ಅರಸು ಅವರು ದೇವಳದ ಬಾಗಿಲು ತೆರೆಯುತ್ತಿರುವಂತೆಯೇ ಬಾಳೆಕಂದು ಕತ್ತರಿಸಿದರು. ಮುನ್ಸಿಪಲ್ ಕೌನ್ಸಿಲ್ ಸಭೆಯ ಅಧ್ಯಕ್ಷ ಚೆನ್ನವೀರಪ್ಪ ಮತ್ತು ಕಮಿಶನರ್ ಬಿ.ಎ. ಪರಮೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನವೆಂಬರ್ 17ರವರೆಗೆ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.
ಪ್ರತಿ ವರ್ಷ ಆಶ್ವೀಜ ಮಾಸದ ನಂತರ ಪ್ರಥಮ ಗುರುವಾರದಂದು ದೇವಸ್ಥಾನದ ಬಾಗಿಲು ತೆರೆಯಲಾಗುವುದು. ಅನಂತರ ಸಂಪ್ರದಾಯದಂತೆ, ಕನಿಷ್ಟವೆಂದರೆ ಒಂಬತ್ತು ದಿನ, ಗರಿಷ್ಠವೆಂದರೆ 15 ದಿನಗಳವರೆಗೆ ದೇವಸ್ಥಾನ ತೆರೆದಿರುತ್ತದೆ. ಈ ಅವಧಿಯಲ್ಲಿ ಶ್ರೀ ದೇವಿಯ ಆಶೀರ್ವಾದ ಪಡೆಯುವುದು ಅತ್ಯಂತ ಪವಿತ್ರ ಎಂದು ಪರಿಗಣಿಸಲ್ಪಟ್ಟಿದೆ.
(ಇನ್ಫೋ ವಾರ್ತೆ)