ನ.11ರಂದು ಶಿವಮೊಗ್ಗದಲ್ಲಿ ಅಡಿಕೆ ಅಧ್ಯಯನ ಕೇಂದ್ರ ಉದ್ಘಾಟನೆ
ಶಿವಮೊಗ್ಗ : ಅಡಿಕೆ ಬೆಳೆಗಾರರ ಹತ್ತು ವರ್ಷಗಳ ಬೇಡಿಕೆ ಈಡೇರಿದೆ. ನಗರದಲ್ಲಿ ಅಡಿಕೆ ಅಧ್ಯಯನ ಕೇಂದ್ರವನ್ನು ಆರಂಭಿಸಲು ರಾಜ್ಯ ಸರಕಾರ ಕೊನೆಗೂ ಒಪ್ಪಿಕೊಂಡಿದೆ.
ನವೆಂಬರ್ 11ರಂದು ರಾಜ್ಯ ಕೃಷಿ ಸಚಿವ ಟಿ.ಬಿ. ಜಯಚಂದ್ರ ಅಡಿಕೆ ಅಧ್ಯಯನ ಕೇಂದ್ರವನ್ನು ಉದ್ಘಾಟಿಸುವರು. ನವಿಲೆ ಗ್ರಾಮದ ಕೃಷಿ ವಿದ್ಯಾಲಯದ ಆವರಣದಲ್ಲಿ ಸುಮಾರು 2.48 ಕೋಟಿ ರೂಪಾಯಿ ವೆಚ್ಚದಲ್ಲಿ ಅಧ್ಯಯನ ಕೇಂದ್ರವನ್ನು ನಿರ್ಮಿಸಲಾಗುವುದು. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಈ ಅಧ್ಯಯನ ಕೇಂದ್ರ ನೆರವಾಗಲಿದೆ.
ಅಡಿಕೆಯನ್ನು ವೀಳ್ಯದೆಲೆ ಜೊತೆಗೆ ಮಾತ್ರವಲ್ಲದೆ ಇತರ ಮಾರುಕಟ್ಟೆ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆಗಳು ನಡೆಯಲಿವೆ. ರಾಜ್ಯದಲ್ಲಿ 1.09ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಮಲೆನಾಡು ಪ್ರದೇಶದಲ್ಲಿಯೇ ವರ್ಷಕ್ಕೆ ಸುಮಾರು 50 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ಅಡಿಕೆ ಬೆಳೆಗಾರರು ಸದ್ಯಕ್ಕೆ ಅಧ್ಯಯನ ಕೇಂದ್ರದಲ್ಲಿನ ಹೊಸ ಸಂಶೋಧನೆಗಳ ಬಗೆಗೆ ಕಾತುರರಾಗಿದ್ದಾರೆ.
(ಇನ್ಫೋ ವಾರ್ತೆ)